ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ಹಣ ನೀಡದಿದ್ದರೆ ಸಸ್ಪೆಂಡ್ ಮಾಡುತ್ತೇನೆ: ಅಧಿಕಾರಿಗೆ ಸಚಿವ ನಾರಾಯಣಗೌಡ ಎಚ್ಚರಿಕೆ

Update: 2020-09-14 09:13 GMT

ಕೋಲಾರ, ಸೆ.14: ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು. ಇಲ್ಲದಿದ್ದಲ್ಲಿ ಸಸ್ಪೆಂಡ್ ಮಾಡುತ್ತೇನೆ‌ ಎಂದು ಕೋಲಾರ ರೇಷ್ಮೆ ಇಲಾಖೆ ಡಿಡಿ ಆಂಜನೇಯ ಗೌಡ ಅವರಿಗೆ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ‌.

ಸಚಿವರು ಶ್ರೀನಿವಾಸಪುರದಲ್ಲಿರುವ ಜಿ. ನಾರಾಯಣಗೌಡ ತೋಟಗಾರಿಕೆ ಕ್ಷೇತ್ರದ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 

ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವರು, ಮ್ಯಾಂಗೊಬೋರ್ಡ್ ಇದ್ದೂ ಇಲ್ಲದಂತಿದೆ. ರೈತರಿಗೆ ಸರಿಯಾದ ಅನುಕೂಲ ಆಗುತ್ತಿಲ್ಲ. ಸರ್ಕಾರದಿಂದ ಹಣ ನೀಡಲು ಸಿದ್ದ, ಆದರೆ ರೈತರಿಗೆ ಅದು ಸಹಾಯವಾಗುವಂತಿರಬೇಕು. ಹೀಗಾಗಿ ಅಧಿವೇಶನ ಮುಗಿದ ತಕ್ಷಣ ಸಭೆ ನಡೆಸಿ ಬೋರ್ಡ್ ಉನ್ನತೀಕರಣ ಮಾಡುತ್ತೇವೆ ಎಂದು ಸಚಿವರು ಹೇಳಿದರು.

ಲಾಕ್ ಡೌನ್ ಸಂದರ್ಭದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟವಾಗದೆ ನಷ್ಟವಾಗಿತ್ತು. ಸರ್ಕಾರ ಪರಿಹಾರ ಕೂಡ ಘೋಷಣೆ ಮಾಡಿದೆ‌. ಕೆಲವು ಕಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗ ಹಣ ಜಮ ಆಗಿಲ್ಲ. ಅಧಿಕಾರಿಗಳು ಎಲ್ಲ ಸಮಸ್ಯೆ ಸರಿಪಡಿಸಬೇಕು. ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು ಎಂದು ಸೂಚನೆ ನೀಡಿದರು‌.

ಇದೆ ವೇಳೆ ರೇಷ್ಮೆ ಬೆಳೆಗಾರರಿಗೆ ನೀಡಿರುವ ಬೆಂಬಲ ಬೆಲೆ ರೈತರಿಗೆ ಈವರೆಗೂ ತಲುಪಿಲ್ಲ ಎಂಬ ಕಾರಣಕ್ಕೆ ರೇಷ್ಮೆ ಇಲಾಖೆ ಡಿಡಿ ಅಂಜನೆಯಗೌಡ ಅವರನ್ನು ತರಾಟೆ ತೆಗೆದುಕೊಂಡ ಸಚಿವರು, ಐದು ದಿನದೊಳಗೆ ರೈತರ ಖಾತೆಗೆ ಹಣ ಹೋಗಬೇಕು‌. ಬೇರೆ ಎಲ್ಲ ಕಡೆ ಹಣ ಸಂದಾಯ ಆಗಿದೆ‌. ರೈತರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ‌. ಆದರೆ ಕೋಲಾರದಲ್ಲಿ ಮಾತ್ರ ಯಾಕೆ ವಿಳಂಬ ಆಗಿದೆ. ತಕ್ಷಣ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು. 

ಮ್ಯಾಂಗೊ ಬೋರ್ಡ್ ಗೆ 25 ಕೋಟಿ ರೂ. ವಾರ್ಷಿಕ ಅನುದಾನ ನೀಡುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು, ಡ್ರಿಪ್ ಇರಿಗೇಷನ್ ಗೆ ಶೇ. ನೂರರಷ್ಟು ಸಬ್ಸಿಡಿ ನೀಡಿವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಎಮ್ಮೆಲ್ಸಿ ನಾರಾಯಣಸ್ವಾಮಿ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News