ತಾಯಿ ಆಸೆ ಪೂರೈಸಿದ 'ಆಧುನಿಕ ಶ್ರವಣಕುಮಾರ’ನಿಗೆ ಕಾರು ಉಡುಗೊರೆ ನೀಡಿದ ಮಹೀಂದ್ರ ಕಂಪೆನಿ
ಮೈಸೂರು, ಸೆ.19: ಇಂದಿನ ಅಧುನಿಕ ಯುಗದಲ್ಲಿ ವಯಸ್ಸಾದ ತಂದೆ-ತಾಯಿಯನ್ನು ದೂರ ಮಾಡುವ ಮಕ್ಕಳಿರುವ ಈ ಕಾಲದಲ್ಲಿ ಮೈಸೂರಿನಲ್ಲೊಬ್ಬರು ತನ್ನ ತಾಯಿಯ ದೇಶ ಸುತ್ತುವ ಆಸೆ ಪೂರೈಸಿ ಆಧುನಿಕ ‘ಶ್ರವಣಕುಮಾರ’ ಎನಿಸಿಕೊಂಡಿದ್ದಾರೆ.
ತನ್ನ ತಾಯಿಯ ಇಚ್ಛೆಯನ್ನು ಪೂರೈಸುವ ಸಲುವಾಗಿ ಮೈಸೂರಿನ ಕೃಷ್ಣಕುಮಾರ್ ತನ್ನ ಹಳೆ ಬಜಾಜ್ ಚೇತಕ್ ಸ್ಕೂಟರ್ನಲ್ಲೇ ತಾಯಿ ಚೂಡಾರತ್ನಾ(70)ರನ್ನು ದೇಶಾದ್ಯಂತ ಕರೆದೊಯ್ದು ತೀರ್ಥಯಾತ್ರೆ ಮಾಡಿಸಿದ್ದಾರೆ. ತಂದೆ ಕೊಡಿಸಿದ್ದ ಚೇತಕ್ ಸ್ಕೂಟರ್ನಲ್ಲಿ ತಾಯಿಯೊಂದಿಗೆ ಭಾರತದ 20 ರಾಜ್ಯಗಳು ಹಾಗೂ ನೇಪಾಳ, ಭೂತನ್ ಮ್ಯಾನ್ಮಾರ್ ದೇಶಗಳನ್ನು ಸುತ್ತಾಡಿ ಬುಧವಾರ ಮೈಸೂರಿನಲ್ಲಿರುವ ತಮ್ಮ ಮನೆ ತಲುಪಿದ್ದಾರೆ. ಇವರು ಸುಮಾರು 56,522 ಕಿ.ಮೀ. ಕ್ರಮಿಸಿದ್ದಾರೆನ್ನಲಾಗಿದೆ.
ಈ ಆಧುನಿಕ ಶ್ರವಣಕುಮಾರ್ ಬಗ್ಗೆ ಮಾಹಿತಿ ತಿಳಿದ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಸಿಇಒ ಆನಂದ ಮಹೀಂದ್ರ ಅವರು ಕೃಷ್ಣ ಕುಮಾರ್ ಗೆ ಕಾರು ಉಡುಗೊರೆ ನೀಡುವುದಾಗಿ ಪ್ರಕಟಿಸಿದ್ದರು. ಅದರಂತೆ ಶುಕ್ರವಾರ ಕೃಷ್ಣ ಕುಮಾರ್ ರಿಗೆ ಮೈಸೂರಿನ ಮಹೀಂದ್ರ ಶೋರೂಂನಲ್ಲಿ ‘ಮಹೀಂದ್ರ ಕೆಯುವಿ 100’ ಕಾರನ್ನು ನೀಡಲಾಗಿದೆ.