ಹೆಚ್ಚು ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿ: ಯುವ ಕಾಂಗ್ರೆಸ್ ಸದಸ್ಯರಿಗೆ ಡಿಕೆಶಿ ಸಂದೇಶ

Update: 2020-09-19 16:39 GMT

ಬೆಂಗಳೂರು, ಸೆ.19: ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿ. ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನೀವು ನಾಯಕರಾಗಿ ಬೆಳೆಯಿರಿ ಎಂದು ಯುವ ಕಾಂಗ್ರೆಸ್ ಸದಸ್ಯರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಡಿಯೋ ಮೂಲಕ ಯುವ ಕಾಂಗ್ರೆಸ್ ಸದಸ್ಯರಿಗೆ ಸಂದೇಶ ರವಾನಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಈ ಪಕ್ಷದ ನೆರಳಿನಲ್ಲಿ ನಾವೆಲ್ಲ ಬೆಳೆಯುತ್ತಿದ್ದೇವೆ. ಇವತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ದೊಡ್ಡ ಯುವಕರ ಪಡೆಯನ್ನೆ ನಿರ್ಮಾಣ ಮಾಡಿದೆ ಎಂದರು.

ಇಂದು ನಾವು ನೀವೆಲ್ಲ ಸೇರಿ ಈ ದೇಶದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ಈ ದೇಶಕ್ಕೆ ಶಕ್ತಿ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದು, ಯುವಕರನ್ನು ಸೇರಿಸುವುದು ನಮ್ಮ ನಿಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯೂತ್ ಕಾಂಗ್ರೆಸ್‍ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಸಂಸತ್ತಿನವರೆಗೆ ಚುನಾವಣೆ ಮೂಲಕ ನಾಯಕರ ಆಯ್ಕೆ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ಶಿವಕುಮಾರ್ ತಿಳಿಸಿದರು.

ಈ ನಾಯಕರಾಗಿ ನೀವು ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಈ ದೃಷ್ಟಿಯಿಂದ ಯುವಕರಿಗೆ ಚುನಾವಣೆಯಿಂದ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹೀಗಾಗಿ ನೀವೆಲ್ಲರೂ ಅತಿ ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ. ನಮ್ಮ ನಾಯಕರಾಗಿ ಬೆಳೆಯಬೇಕು, ಈ ದೇಶಕ್ಕೆ ಆಸ್ತಿಯಾಗಬೇಕು. ನಾನು ಕೂಡ ಯುವ ಕಾಂಗ್ರೆಸ್, ತಾಲೂಕು ಮಟ್ಟದಿಂದ ಬೆಳೆದು, ಇಂದು ಕೆಪಿಸಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನೀವೆಲ್ಲ ರಾಜ್ಯದ ಮುಂದಿನ ನಾಯಕರಾಗಿ ಬೆಳೆಯಲು ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ. ಬ್ಲಾಕ್ ಕಾಂಗ್ರೆಸ್, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಯಕರು ಎಲ್ಲರೂ ಸೇರಿ ಯೂತ್ ಕಾಂಗ್ರೆಸ್ ಹಾಗೂ ಯುವ ಪೀಳಿಗೆಯನ್ನು ಬಲಪಡಿಸಬೇಕಿದೆ ಎಂದು ಅವರು ಹೇಳಿದರು.

ನೀವು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ. ಇದಕ್ಕೆ ಮುಕ್ತ ಅವಕಾಶ ಇದ್ದು, ನಿಮ್ಮ ಮೇಲೆ ಯಾರ ಒತ್ತಡವೂ ಇರುವುದಿಲ್ಲ. ಹೆಚ್ಚು ಸದಸ್ಯರನ್ನು ಮಾಡಿದಷ್ಟು ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಇದು ದೊಡ್ಡ ಅವಕಾಶ. ನಿಮ್ಮೆಲ್ಲರಿಗೂ ಶುಭವಾಗಲಿ. ನಿಮಗೆ ನಮ್ಮ ಸಂಪೂರ್ಣ ಸಹಕಾರ ಸಿಗುತ್ತದೆ ಎಂದು ಅವರು ತಿಳಿಸಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಅತಿ ಹೆಚ್ಚು ನಾಯಕರನ್ನು ಬೆಳೆಸಲು ಈ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಶಿವಕುಮಾರ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News