ಪ್ಲಾಸ್ಮಾ ದಾನಿಗಳಿಗೆ ಇನ್ನೂ ಸಿಗದ ಸರಕಾರದ ಪ್ರೋತ್ಸಾಹ ಧನ: ಆರೋಪ
ಬೆಂಗಳೂರು, ಸೆ.22: ಕೊರೋನ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ಲಾಸ್ಮಾ ದಾನಿಗಳಿಗೆ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಸರಕಾರ ಹೇಳಿತ್ತು. ಆದರೆ, ಯಾವೊಬ್ಬ ಪ್ಲಾಸ್ಮಾ ದಾನಿಗೂ ಇದುವರೆಗೂ ಪ್ರೋತ್ಸಾಹ ಧನ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕೋವಿಡ್ ಸೋಂಕು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿದ್ದ ಪ್ಲಾಸ್ಮಾ ಥೆರಪಿ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡುವಂತೆ ಸರಕಾರ ಮನವಿ ಮಾಡಿತ್ತು. ಅಲ್ಲದೇ ಪ್ಲಾಸ್ಮಾ ದಾನಿಗಳಿಗೆ ಐದು ಸಾವಿರ ರೂ ಪ್ರೋತ್ಸಾಹ ಧನ ನೀಡುವುದಾಗಿ ಕಳೆದ ಜುಲೈನಲ್ಲಿ ಸರಕಾರ ಘೋಷಣೆ ಮಾಡಿತ್ತು, ಆದರೆ ಇದೀಗ ಪ್ಲಾಸ್ಮಾ ದಾನಿಗಳಿಗೆ ಈ ಪ್ರೋತ್ಸಾಹ ಧನ ಲಭ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಪ್ಲಾಸ್ಮಾ ದಾನಿಗಳ ಕುರಿತು ಸರಕಾರ ದತ್ತಾಂಶವನ್ನೇ ಸಂಗ್ರಹಿಸಿಲ್ಲ. ಎಷ್ಟು ಮಂದಿ ಪ್ಲಾಸ್ಮಾ ದಾನಿಗಳು ನೋಂದಣಿಯಾಗಿದ್ದಾರೆ ಮತ್ತು ಎಷ್ಟು ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂಬ ಅಂಶಗಳು ಸರಕಾರದ ಬಳಿ ಇಲ್ಲ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಎಸ್.ಎ.ಎಸ್.ಟಿ ಟಾಸ್ಕ್ ಫೋರ್ಸ್ ನ ವೈದ್ಯಕೀಯ ನಿರ್ವಹಣೆ ವಿಭಾಗದ ನಿರ್ದೇಶಕ ಡಾ.ಬಿ. ಮಂಜುನಾಥ್ ಅವರು, ಪ್ಲಾಸ್ಮಾ ಪ್ಯಾಕೇಜ್ ಕುರಿತಂತೆ ಕೆ.ಎಸ್.ಎ.ಪಿ.ಎಸ್ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ನಾವು ಪಾವತಿ ಪ್ರಕ್ರಿಯೆ ಪ್ರಾರಂಭಿಸಬಹುದು. ನಾವು ರಾಜ್ಯದ ವಿವಿಧ ರಕ್ತ ಬ್ಯಾಂಕ್ಗಳಿಂದ ದಾನಿಗಳ ವಿವರಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ. ರಾಜ್ಯದಲ್ಲಿ 60 ಕ್ಕೂ ಹೆಚ್ಚು ಪ್ಲಾಸ್ಮಾ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದ್ದಾರೆ.