ಸೆ.28ರ 'ಕರ್ನಾಟಕ ಬಂದ್‍' ಕರೆಗೆ ಎಸ್‍ಯುಸಿಐ ಬೆಂಬಲ

Update: 2020-09-24 12:26 GMT

ಬೆಂಗಳೂರು, ಸೆ.24: ಕೇಂದ್ರ ಸರಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವ ರೈತ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸೆ.28 ರಂದು ನಡೆಯಲಿರುವ ಕರ್ನಾಟಕ ಬಂದ್‍ಗೆ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷವು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಂಗೀಕರಿಸಿರುವ, ರೈತ-ವಿರೋಧಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆ ಕೃಷಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ 2002ರ ತಿದ್ದುಪಡಿ, ಬೆಂಬಲ ಬೆಲೆ ಕಾಯ್ದೆ ತಿದ್ದುಪಡಿಗಳ ವಿರುದ್ಧ ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು (ಎಐಕೆಎಸ್‍ಎಸ್‍ಸಿ) ಬಂದ್‍ಗೆ ಕರೆ ನೀಡಿದ್ದು, ಅದಕ್ಕೆ ಬೆಂಬಲಿಸಲು ಎಸ್‍ಯುಸಿಐ ನಿರ್ಧರಿಸಿದೆ.

ಕೋವಿಡ್-19 ಮಹಾಮಾರಿಯ ಸಂದರ್ಭವನ್ನು ಬಳಸಿಕೊಂಡು, ಪ್ರಜಾತಾಂತ್ರಿಕ ಚರ್ಚೆಗಳಿಗೆ ಅವಕಾಶ ನೀಡದೆ, ಸಂಸತ್ತು, ವಿಧಾನಮಂಡಲಗಳಲ್ಲಿ ಚರ್ಚೆ ನಡೆಸದೆ ತರಾತುರಿಯಲ್ಲಿ ಈ ಕಾಯ್ದೆಗಳನ್ನು ಅಂಗೀಕರಿಸುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಿತೂರಿಯನ್ನು ಬಯಲಿಗೆಳೆದಿದೆ. ಈ ಕಾಯ್ದೆಗಳ ಜಾರಿಯಿಂದ ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯ ಕ್ಷೇತ್ರದಲ್ಲಿ ಕಾರ್ಪೋರೇಟ್ ಕುಳಗಳು ಲಗ್ಗೆ ಇಟ್ಟು ಸಣ್ಣ- ಮಧ್ಯಮ ರೈತರು ಸರ್ವನಾಶವಾಗಲಿದ್ದಾರೆ. ಸಾಮಾನ್ಯ ಗ್ರಾಹಕರು ಕೂಡ ಬೆಲೆ ಏರಿಕೆಯಿಂದ ನಲುಗಲಿದ್ದಾರೆ. ವಿದ್ಯುತ್ ರಂಗವು ಖಾಸಗೀಕರಣಗೊಂಡು ರೈತರು ಸಬ್ಸಿಡಿಯಿಂದ ವಂಚಿತರಾಗಲಿದ್ದಾರೆ. ದವಸ ಧಾನ್ಯ, ಎಣ್ಣೆ ಕಾಳುಗಳು, ಈರುಳ್ಳಿಯಂತಹ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಬೆಲೆಗಳು ಹೆಚ್ಚಾಗಲಿವೆ. ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿರುವ ರೈತರು ತಮ್ಮ ಕೃಷಿ ಭೂಮಿಯನ್ನು ಮಾರಿ ಬೀದಿಪಾಲಾಗಲಿದ್ದಾರೆ. ಇಂತಹ ವಿನಾಶಕಾರಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ರೈತ ಸಂಘಟನೆಗಳು ಒಗ್ಗಟಾಗಿ ಹೋರಾಟಕ್ಕೆ ಮುಂದಾಗಿದ್ದು, ನಾವು ಜತೆಯಾಗಿ ಬೆಂಬಲಿಸಲಿದ್ದೇವೆ ಎಂದು ಎಸ್‍ಯುಸಿಐ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News