ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-09-28 12:48 GMT

ಹಾವೇರಿ, ಸೆ. 28: ಕಾಂಗ್ರೆಸ್ ಈಗ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಟೀಕಿಸಿದ್ದಾರೆ.

ಸೋಮವಾರ ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೇಳುವುದೊಂದು ಮಾಡುವುದು ಇನ್ನೊಂದು. 2019ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು. ಅಲ್ಲದೇ ಭೂ ಸುಧಾರಣಾ ಕಾಯ್ದೆ ತೆಗೆಯುವ ಬಗ್ಗೆ ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದರು. ಅವರು ಹೇಳಿದಂತೆಯೇ ಈಗ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್ ನಾಯಕರೇ 79ಎ ಮತ್ತು `ಬಿ'ಯನ್ನು ಅನ್ನು ಕೈಬಿಡಬೇಕೆಂದು ವಿಧಾನಸಭೆಯಲ್ಲಿಯೇ ಹೇಳಿದ್ದರು. ಅದು ವಿಧಾನಸಭೆಯಲ್ಲಿ ದಾಖಲೆಯೂ ಆಗಿದೆ. ಆದರೆ, ಇದೀಗ ರಾಜಕೀಯ ದುರುದ್ದೇಶಕ್ಕಾಗಿ ವಿರೋಧಿಸುತ್ತಿದೆ. ಕಾಂಗ್ರೆಸ್ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಪ್ರಧಾನಿ ಮೋದಿ ಸಾಮಾನ್ಯ ಸಣ್ಣ ರೈತನಿಗೂ ಅನುಕೂಲವಾಗುವಂತೆ ಕೃಷಿ ಕಾಯಿದೆಗಳನ್ನು ತಂದಿದ್ದಾರೆ. ಆದರೆ, ವಿನಾಕಾರಣ ರಾಜಕೀಯ ದುರುದ್ದೇಶಕ್ಕಾಗಿ ಇದನ್ನು ಕಾಂಗ್ರೆಸ್ ಜೆಡಿಎಸ್ ವಿರೋಧಿಸುತ್ತಿವೆ. ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಿಂದ ರಾಜ್ಯದಲ್ಲಿ ಪಾಳುಬಿದ್ದಿರುವ 30-40 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯಲು ಸಾಧ್ಯವಾಗುತ್ತದೆ. ಕೃಷಿಗೆ ಉತ್ತೇಜನ ನೀಡಲು ಭೂಕಾಯಿದೆಗೆ ತಿದ್ದುಪಡಿಯಾಗಿದೆ. ಇದರಿಂದ ಯುವಕರಿಗೆ ಉದ್ಯೋಗವಕಾಶಗಳು ಹೆಚ್ಚಾಗಲಿವೆ ಎಂದು ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News