ಕೊಡಗಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ: ಪ್ರತಿಭಟನಾಕಾರರ ಬಂಧನ; ಪರ, ವಿರೋಧ ಪ್ರತಿಭಟನೆ

Update: 2020-09-28 17:22 GMT

ಮಡಿಕೇರಿ ಸೆ.28: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರುದ್ಧ ರೈತ, ಕಾರ್ಮಿಕ ಮತ್ತು ದಲಿತ ಪರ ಸಂಘಟನೆಗಳು ಕರೆ ನೀಡಿದ್ದ 'ಕರ್ನಾಟಕ ಬಂದ್'ಗೆ ಕೊಡಗು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಜನ ಜೀವನ ಎಂದಿನಂತೆ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿವಿಧ ಪಕ್ಷಗಳು ಕರೆ ನೀಡಿದ್ದ ಕೊಡಗು ಬಂದ್ ಗೆ ಮಡಿಕೇರಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿಭಟನಾಕಾರರು ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರಾದರೂ ಬಹುತೇಕ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ತೆರೆದು ಎಂದಿನಂತೆ ವ್ಯಾಪಾರ, ವಹಿವಾಟು ನಡೆಸಿದರು. ಕೆಲವು ಅಂಗಡಿ, ಹೋಟೆಲ್‍ಗಳು ಮುಚ್ಚಲ್ಪಟ್ಟಿದ್ದವು, ಎಲ್ಲಾ ಸರ್ಕಾರಿ ಕಚೇರಿಗಳು ಕೂಡ ಕಾರ್ಯನಿರ್ವಹಿಸಿದವು, ಬಸ್ ಗಳ ಸಂಚಾರ ಎಂದಿನಂತೆ ಇತ್ತು.

ಬಿಜೆಪಿಯೇತರ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ, ಸಿಪಿಐಎಂ ಸೇರಿದಂತೆ ರೈತ ಪರ ಸಂಘಟನೆಗಳು ಸೋಮವಾರ ಬೆಳಗ್ಗೆ ನಗರದ ಜ.ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡು, ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. 

ಈ ಸಂದರ್ಭ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್, ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಇ.ಮ್ಯಾಥ್ಯು ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ವಿರಾಜಪೇಟೆಯಲ್ಲಿ ಉಭಯ ಪ್ರತಿಭಟನೆ
ರೈತ ವಿರೋಧಿ ನೀತಿಯನ್ನು ಖಂಡಿಸಿ ವಿರಾಜಪೇಟೆ ಪಟ್ಟಣದಲ್ಲಿ ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಇದೇ ಸಂದರ್ಭ ಬಿಜೆಪಿ ಪ್ರಮುಖರು ಕೂಡ ಕೇಂದ್ರ ಸರ್ಕಾರದ ಪರ ಘೋಷಣೆಗಳನ್ನು ಕೂಗುತ್ತಾ ಬಂದರು.

ಪರಸ್ಪರ ಘೋಷಣೆಗಳು ಕಾವೇರುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಪಟ್ಟಣದ ಶೇ.70 ರಷ್ಟು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಆಟೋ ರಿಕ್ಷಾಗಳ ಸಂಚಾರ ವಿರಳವಾಗಿತ್ತು.

ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಜೆಡಿಎಸ್., ಸಿಪಿಐ, ಸಿಪಿಐಎಂ, ಎಸ್ಡಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ಸಂಘಟನೆಗಳಾದ ಎ.ಐ.ಟಿ.ಯು.ಸಿ, ಸಿ.ಐ.ಟಿ.ಯು, ಕರ್ನಾಟಕ ರೈತ ಸಂಘ, ವಿವಿಧ ಸಂಘಟನೆಗಳ ಮಹಿಳಾ ವಿಭಾಗಗಳ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು, ರಾಷ್ಟ್ರದ ಬೆನ್ನೆಲುಬಾಗಿರುವ ಕೋಟಿಗಟ್ಟಲೆ ರೈತರಿಗೆ ಮಾರಕವಾಗಿರುವಂತ ಕರಾಳ ಮಸೂದೆಗಳನ್ನು ಜಾರಿಗೆ ತರುವುದರ ಮೂಲಕ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷಗಳೊಂದಿಗೆ ಕನಿಷ್ಟ ಸಮಾಲೋಚನೆ ಕೂಡ ಮಾಡದೆ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಮಸೂದೆಗಳು ರೈತರ ಪರವಾಗಿದೆ ಎಂದಾಗಿದ್ದರೆ ವಿರೋಧ ಪಕ್ಷಗಳ ಮುಂದೆ ಇಡಬಹುದಿತ್ತು. ಆದರೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್.ಮತೀನ್, ಕಾಂಗ್ರೆಸ್ ಪ್ರಮುಖರಾದ ಮುಹಮ್ಮದ್ ರಾಫಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಇ.ಎಂ.ಸಿರಾಜ್, ಎಸ್.ಡಿ.ಪಿ.ಐನ ಸಾಬಿತ್ ಮತ್ತಿತರರು ಹಾಜರಿದ್ದರು.

ಬಿಜೆಪಿ ನಗರಾಧ್ಯಕ್ಷ ಟಿ.ಪಿ.ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಟ್ರಪಂಡ ರಘು ನಾಣಯ್ಯ ಹಾಗೂ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರು ಬಂದ್ ಗೆ ಕರೆ ನೀಡಿರುವ ಕ್ರಮವನ್ನು ಖಂಡಿಸಿದರು.

ಸೋಮವಾರಪೇಟೆಯಲ್ಲಿ ನೀರಸ
ಸೋಮವಾರಪೇಟೆ ತಾಲೂಕಿನಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗಿನ ಅವಧಿಯಲ್ಲಿ ನಗರದ ಕಕ್ಕೆ ಹೊಳೆ ಜಂಕ್ಷನ್ ಬಳಿ ಬಿಜೆಪಿಯೇತರ ಪಕ್ಷಗಳಿಂದ ಕೆಲ ಕಾಲ ಪ್ರತಿಭಟನೆ ನಡೆಯಿತು. ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆಯಲ್ಪಟ್ಟಿತಾದರೂ, ಜನ ಸಂಚಾರ ವಿರಳವಾಗಿತ್ತು.

ರೈತ ಸಂಘದಿಂದ ಮೆರವಣಿಗೆ
ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಯನ್ನು ವಿರೋಧಿಸಿ ಜಿಲ್ಲಾ ರೈತಸಂಘದ ಕಾರ್ಯಕರ್ತರು ಗೋಣಿಕೊಪ್ಪ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ ಸಂಘ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹರಿಶ್ಚಂದ್ರ ಪುರದಲ್ಲಿರುವ ಸಂಘದ ಕಾರ್ಯಾಲಯದಿಂದ ಉಮಾಮಹೇಶ್ವರಿ ದೇವಸ್ಥಾನದ ವರೆಗೆ ತೆರಳಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಯಾವುದೇ ಕಾನೂನನ್ನು ಜಾರಿಗೆ ತರಬೇಕಾದರೆ ಚರ್ಚಿಸಬೇಕಾದ ಅವಶ್ಯಕತೆ ಇದೆ. ಆದರೆ ಕೇಂದ್ರ ಸರ್ಕಾರ ವಿರೋಧ ಪಕ್ಷ ಹಾಗೂ ರೈತರನ್ನು ಕತ್ತಲಲ್ಲಿಟ್ಟು ರೈತ ವಿರೋಧಿ ಕಾನೂನು ಜಾರಿಗೆ ತಂದಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯಾರು ಬೇಕಾದರೂ ಯಾರು ಬೇಕಾದರೂ ಕೃಷಿಭೂಮಿಯನ್ನು ಖರೀದಿಸಬಹುದು ಎಂಬ ಕಾನೂನು ಕೂಡ ರಾಜಕಾರಣಿಗಳಿಗೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಹೊರತು ರೈತರಿಗೆ ಸಹಾಯ ಮಾಡುವ ಉದ್ದೇಶ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಭೂಸುಧಾರಣಾ ಕಾಯ್ದೆ ವಾಪಸ್ ಪಡೆಯಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ರೈತ ಸಂಘ  ಮನವಿಗೆ ಓಗೊಟ್ಟ ಪಟ್ಟಣದ ವರ್ತಕರು ಎರಡು ಗಂಟೆಕಾಲ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಖಜಾಂಚಿ ಪುಚ್ಚಿ ಮಡ ಪೂಣಚ್ಚ. ಮೋಟಯ್ಯ, ಅನಿಶ್ ಮಾದಪ್ಪ ತಿತಿರ ಧರ್ಮಜ, ಕಿಶೋರ್, ಕಾರ್ಯಪ್ಪ ರೈತ ಸಂಘದ ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  .

ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ರಾಮರೆಡ್ಡಿ ಮತ್ತು ಠಾಣಾಧಿಕಾರಿ ಸುರೇಶ್ ಗೋಪಣ್ಣ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. 

ನಾಪೋಕ್ಲು ನೀರಸ
ನಾಪೋಕ್ಲು ವ್ಯಾಪ್ತಿಯಲ್ಲಿ ಬಂದ್ ಕರೆಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ. ಎಲ್ಲಾ ಅಂಗಡಿ, ಮುಂಗಟ್ಟುಗಳು ತೆರೆದಿದ್ದು, ಜನಜೀವನ ಎಂದಿನಂತೆ ಇತ್ತು. ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು.

ಬೀಟೆಕಟ್ಟೆಯಲ್ಲಿ ಪ್ರತಿಭಟನೆ
ವಿವಿಧ ರೈತ ಸಂಘಟನೆಗಳು ಸೋಮವಾರಪೇಟೆಯ ಬೀಟೆಕಟ್ಟೆ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದವು. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಗೌಡಳ್ಳಿ ಮತ್ತು ಡೊಡ್ಡಮಳ್ತೆ ರೈತ ಹೋರಾಟ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.  

ಸಂಪಾಜೆಯಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಸಂಪಾಜೆ ಮತ್ತು ಚೆಂಬು ರೈತ ಸಂಘ ಹಾಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು. ಸಂಪಾಜೆ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್.ಸುರೇಶ್, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ವರಿ, ಮಹಿಳಾ ಘಟಕದ ಸಂಪಾಜೆ ವಲಯ ಅಧ್ಯಕ್ಷೆ ಪ್ರೀತಿಕಾ, ರಿಯಾಜ್ ಕೊಯನಾಡು, ಎಂ.ಪಿ.ವಾಸು, ಮೋಹನ ಬಾಳೆಕಜೆ,  ಜಾಫರ್ ಕೊಯನಾಡು, ದೇವಜನ ದೇವಪ್ಪ, ಬಿ. ರಘುನಾಥ್, ಕೆ.ಬಿ.ಮಾಧವ, ಮಹೇಂದ್ರ ಚಡಾವು, ನಾಸಿರ್ ತಿಲಕ ಚಡಾವು, ಉಮೇಶ ಪೂಜಾರಿ, ಸುರೇಂದ್ರ, ರಫೀಕ್ ಚಡಾವು, ಉಮ್ಮರ್ ಚಡಾವು, ಜಯಪ್ರಕಾಶ್ ಗುಡ್ಡೆಗದ್ದೆ, ಗಣೇಶ್ ಗುಡ್ಡೆಗದ್ದೆ, ಸುರೇಂದ್ರ ಕೊಯನಾಡು, ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News