ರೈತ ಬೆಳೆ ಸಮೀಕ್ಷೆ ಯಶಸ್ವಿ: ಪ್ರಾಯೋಗಿಕ ಹಂತದ ಕಡಿಮೆ ಅವಧಿಯಲ್ಲಿಯೇ ಶೇ.88ರಷ್ಟು ಪ್ರಗತಿ

Update: 2020-10-01 11:03 GMT

ಬೆಂಗಳೂರು, ಅ. 1: `ನನ್ನ ಬೆಳೆ ನನ್ನ ಹಕ್ಕು' ಎಂದು ರೈತ ಹೆಮ್ಮೆಯಿಂದ ಹೇಳುವ ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ರೈತ ಬೆಳೆ ಸಮೀಕ್ಷೆ ಆ್ಯಪ್ ಸಮೀಕ್ಷೆ ಸೆ.23ಕ್ಕೆ ಅಂತ್ಯಗೊಂಡಿದ್ದು, ಸಮೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

ಪ್ರಾಯೋಗಿಕ ಹಂತದಲ್ಲಿಯೇ ಶೇ.88ಕ್ಕೂ ಹೆಚ್ಚಿನ ಪ್ರಗತಿ ಸಾಧಿಸಿರುವುದು ಕೇಂದ್ರದ ಗಮನ ಸೆಳೆದಿದೆ. ಅಂದರೆ ರೈತರೇ ಮೊಬೈಲ್ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಈ ಯೋಜನೆ ಕಡಿಮೆ ಅವಧಿಯಲ್ಲಿಯೇ ಇಡೀ ದೇಶದ ಗಮನ ಸೆಳೆದಿದೆ. ರೈತರೇ ಬೆಳೆ ಸಮೀಕ್ಷೆ ನಡೆಸುವ ಪ್ರಾಯೋಗಿಕ ಹಂತವನ್ನು ಈ ಬಾರಿ ಪರಿಚಯಿಸಲಾಗಿದ್ದು, ಇದು ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಇದಾಗಿದ್ದು, ಕೇವಲ 1 ತಿಂಗಳು 15 ದಿನಗಳೊಳಗೆ 2 ವರ್ಷ ಇತಿಹಾಸವನ್ನೇ ಈ ಸಮೀಕ್ಷೆ ಬದಲಿಸಿದೆ. ಆಗಸ್ಟ್ 15ರಂದು ಇದಕ್ಕೆ ಚಾಲನೆ ನೀಡಲಾಗಿತ್ತಾದರೂ ಆಗಸ್ಟ್ ಅಂತ್ಯದಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಮಳೆ, ನೆಟ್‍ವರ್ಕ್ ಸಮಸ್ಯೆ ಆರಂಭಿಕ ಹಂತದಲ್ಲಿ ಕಂಡುಬಂದಿತ್ತಾದರೂ ಇವೆಲ್ಲವನ್ನು ಸರಿಪಡಿಸಿಕೊಂಡು ಹಾಗೂ ರಾಜ್ಯಾದ್ಯಂತ ಬೆಳೆ ಸಮೀಕ್ಷೆಯನ್ನು ಉತ್ಸವದಂತೆ ಪರಿಗಣಿಸಿದ್ದರಿಂದ ಹಾಗೂ ಕೃಷಿ ಸಚಿವರು ಮತ್ತು ಇಲಾಖೆ ರೈತ ಬೆಳೆ ಸಮೀಕ್ಷೆ ಆ್ಯಪ್‍ಗೆ ಹೆಚ್ಚಿನ ಒತ್ತು ನೀಡಿದ್ದರು.

ಅಲ್ಲದೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಸ್ವತಃ ತಮ್ಮ ಜಮೀನಿನಲ್ಲಿ ನಿಂತು ಸಮೀಕ್ಷೆ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದರು. 2017ರಿಂದ ರಾಜ್ಯದಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಬರೀ 3 ಸಾವಿರ ಪ್ಲಾಟ್‍ಗಳು ಸಮೀಕ್ಷೆಯಾಗಿದ್ದವು. ಮುಂಗಾರು ಹಂಗಾಮಿಗೆ ಸರಕಾರಿ ಅಧಿಕಾರಿಗಳನ್ನು ಉಪಯೋಗಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. 2018ರಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. 2019ರಲ್ಲಿ ಪೂರ್ವ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್‍ಗಳ ಸರ್ವೆ ಮಾಡಲಾಗಿತ್ತು. ಇದಕ್ಕಾಗಿ 4 ತಿಂಗಳ ಸಮಯಾವಕಾಶ ನೀಡಲಾಗಿತ್ತು.

ಆದರೆ, ಈ ಬಾರಿ ರೈತರೇ ಸ್ವತಃ ತಾವೇ ಬೆಳೆ ಸಮೀಕ್ಷೆ ನಡೆಸುವ ಯೋಜನೆ ಇದಾಗಿದ್ದು, 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್‍ಗಳನ್ನು ರೈತರೇ ಅಪ್‍ಲೋಡ್ ಮಾಡಿದ್ದಾರೆ. 2 ಕೋಟಿ 10 ಲಕ್ಷ ಗುರಿಯಿದ್ದು, ಕಡಿಮೆ ಅವಧಿಯಲ್ಲಿಯೇ 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್‍ಗಳು ಅಂದರೆ ನಿಗದಿತ ಕಡಿಮೆ ಅವಧಿಯಲ್ಲಿ ಶೇ.88ಕ್ಕೂ ಪ್ಲಾಟ್ ಸಮೀಕ್ಷೆಯಲ್ಲಿ ಅಪ್‍ಲೋಡ್ ಆಗಿ ಸಾಧನೆಯಾಗಿದೆ.

ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್‍ಗಳ ಸರ್ವೆ ಮಾಡಲಾಗಿತ್ತು. ಕಳೆದ ಬಾರಿ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶದಿಂದ ಕೋವಿಡ್-19 ಸಂದರ್ಭದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5 ಸಾವಿರ ರೂ.ನಂತೆ 7 ಲಕ್ಷ 29 ಸಾವಿರ ರೈತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ನೀಡಲು ಅನುಕೂಲವಾಗಿದೆ. ಕಳೆದ ಬಾರಿಯ ದತ್ತಾಂಶ ಉಪಯೋಗಿಸಿಕೊಂಡು 5 ಲಕ್ಷ 81 ಸಾವಿರದ 896 ರೈತ ಫಲಾನುಭವಿಗಳಿಗೆ 3,164.27ಕೋಟಿ ರೂ. ಮೌಲ್ಯದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ತೊಗರಿ, ಬಿಳಿಜೋಳ ಖರೀದಿ ಮಾಡಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ. ತೋಟಗಾರಿಕಾ ಬೆಳೆಗಳಾದ 20,292 ಹೂವು ಬೆಳೆಗಾರರಿಗೆ 14.50 ಕೋಟಿ ರೂ., 35,819 ತರಕಾರಿ ಬೆಳೆಗಾರರಿಗೆ 31.04 ಕೋಟಿ ರೂ., 35,959 ಹಣ್ಣು ಬೆಳೆಗಾರರಿಗೆ 26.55 ಕೋಟಿ ರೂ.ಸೇರಿ ಒಟ್ಟು 92,070 ಫಲಾನುಭವಿಗಳಿಗೆ 72.09 ಕೋಟಿ ರೂ. ಮೌಲ್ಯದ ಪರಿಹಾರ ನೀಡಲು ಸಾಧ್ಯವಾಗಿತ್ತು. 2019 ರ ಬೆಳೆ ವಿಮೆ ಯೋಜನೆಗೆ 1,33,717 ರೈತರಿಗೆ ಬೆಳೆ ಸಮೀಕ್ಷೆ ದತ್ತಾಂಶವನ್ನು ತಾಳೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ಬಾರಿಯ ದತ್ತಾಂಶವನ್ನು ಬೆಳೆ ವಿಮೆ ಯೋಜನೆ ಇತ್ಯರ್ಥಪಡಿಸಲು, ಪ್ರಕೃತಿ ವಿಕೋಪ ಹಾನಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪರಿಹಾರ ಪಡೆಯಲು, ರಾಜ್ಯ ಹಾಗೂ ಕೇಂದ್ರ ಬೆಳೆ ಆಧಾರಿತ ಪ್ರೋತ್ಸಾಹ ಧನ ನೀಡಲು, ರಾಜ್ಯದ ಬೆಳೆ ವಿಸ್ತೀರ್ಣ ಮರು ಹೊಂದಾಣಿಕೆ ಹಾಗೂ ಬೆಳೆ ಉತ್ಪಾದನೆ ಲೆಕ್ಕಹಾಕಲು ಬಳಸಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News