ರೈತರು, ಕಾರ್ಮಿಕರನ್ನು ಸಮಾಧಿ ಮಾಡಲು ಹೊರಟ ಬಿಜೆಪಿ ಸರಕಾರ: ಲಕ್ಷ್ಮಿ ಹೆಬ್ಬಾಳ್ಕರ್

Update: 2020-10-10 12:14 GMT

ಬೆಂಗಳೂರು, ಅ.10: ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರಕಾರ ರೈತರು ಹಾಗೂ ಕಾರ್ಮಿಕರನ್ನು ಸಮಾಧಿ ಮಾಡಲು ಹೊರಟಿದೆ. ಸಾರ್ವಜನಿಕ ಚರ್ಚೆ ಇಲ್ಲದೆ ಮಾಡಿರುವ ರೈತ, ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಹಾಗೂ ರೈತರು, ಕಾರ್ಮಿಖರ ಪರ ನಿರಂತರ ಹೋರಾಟ ಮಾಡಲಿದೆ ಎಂದು ಕಾಂಗ್ರೆಸ್ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಟ್ವೀಟ್ ಮಾಡಿದ್ದಾರೆ.

ಕೃಷಿ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿ ತರುವಾಗ ರೈತರು, ರೈತ ಸಂಘಟನೆಗಳು, ತಜ್ಞರ ಅಭಿಪ್ರಾಯ ಸಂಗ್ರಹಿಸದೆ, ಕೇವಲ ಖಾಸಗಿ ಕಂಪೆನಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರಕಾರ ತೀರ್ಮಾನ ಕೈಗೊಂಡಿರುವುದು ಬಿಜೆಪಿಯ ರೈತ ವಿರೋಧಿ ಮನಸ್ಥಿತಿಗೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.

ಮುಕ್ತ ಮಾರುಕಟ್ಟೆ ಎಂದು ರೈತರಿಗೆ ಅಂಗೈಯಲ್ಲಿ ಆಕಾಶ ತೋರುತ್ತಿರುವ ಬಿಜೆಪಿ ಎಪಿಎಂಸಿ ಹಾಗೂ ಮಂಡಿ ಮಾರುಕಟ್ಟೆಗಳ ಬಾಗಿಲನ್ನು ಪರೋಕ್ಷವಾಗಿ ಬಂದ್ ಮಾಡಲು ಪಿತೂರಿ ನಡೆಸಿದೆ. ಆ ಮೂಲಕ ಖಾಸಗಿ ಕಂಪೆನಿಗಳ ನಿಯಂತ್ರಣಕ್ಕೆ ಅವಕಾಶ ನೀಡುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದ್ದಾರೆ.

ಈ ತಿದ್ದುಪಡಿಯಿಂದ ರೈತರಿಗೆ ಖಾಸಗಿ ಕಂಪೆನಿಗಳೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡುತ್ತಾರೆ ಎಂದು ಸರಕಾರ ಹೇಳುತ್ತಿದೆ. ಇಷ್ಟೆಲ್ಲ ಪೂರೈಕೆ ಮಾಡುವವರು ರೈತರ ಮೇಲೆ ಇಂತಹ ಬೆಳೆಯನ್ನೆ ಬೆಳೆಯಲು ಒತ್ತಡ ಹಾಕುವ ಸಾಧ್ಯತೆ ಇದೆ. ಜೊತೆಗೆ ಅವರು ಕೊಟ್ಟಷ್ಟು ಹಣ ಪಡೆದು ತನ್ನ ಬೆಳೆ ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಉತ್ತಮ ಬೆಲೆ ಕೊಟ್ಟು ರೈತರನ್ನು ಆಕರ್ಷಿಸುವ ಖಾಸಗಿ ಕಂಪೆನಿಗಳು ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ನಂತರ ಅವರು ಕೊಟ್ಟ ಬೆಲೆಗೆ ರೈತರು ತಮ್ಮ ಬೆಳೆ ಮಾರಬೇಕಾಗುತ್ತದೆ. ಆಗ ರೈತರು ಭೂಮಿ ಮಾಲಕರಾದರೂ ಖಾಸಗಿ ಕಂಪೆನಿಗಳ ಗುಲಾಮರಾಗಿ ಬೆಳೆಯಬೇಕಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News