ಸರಕಾರ ಆಕರ್ಷಣೆಯ ದಸರಾ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ: ಕುರುಬೂರು ಶಾಂತಕುಮಾರ್

Update: 2020-10-10 16:40 GMT

ಬೆಂಗಳೂರು, ಅ.10: ರಾಜ್ಯ ಸರಕಾರ ಯಾರ ಒತ್ತಡಕ್ಕೆ ಮಣಿದು ಸರಳ ದಸರಾ ಹೆಸರಿನಲ್ಲಿ 20 ಕೋಟಿ ರೂ.ಹಣ ಖರ್ಚು ಮಾಡಿ, ಆಕರ್ಷಣೆಯ ದಸರಾ ಆಚರಣೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇಂತಹ ಸಂದಿಗ್ಧ ಸಮಯದಲ್ಲಿ ದಸರಾ ಹೆಸರಿನಲ್ಲಿ ಜನರನ್ನು ಆಕರ್ಷಿಸುವುದು, 300 ಜನ ಸೇರುವುದು ಕೂಡ ಸೋಂಕು ಹರಡಲು ದಾರಿ ಮಾಡಿಕೊಟ್ಟಂತೆ, ಸರಕಾರ ಜನರ ಭಾವನೆಗಳನ್ನು ಧಿಕ್ಕರಿಸಿ ಆಚರಣೆ ಮಾಡುವುದಾದರೆ, ಈ ಸಂದರ್ಭದಲ್ಲಿ ಕೊರೋನ ರೋಗ ತಗುಲಿ ಪ್ರಾಣ ಕಳೆದುಕೊಳ್ಳುವ ಜನರಿಗೆ ಕನಿಷ್ಠ 30 ಲಕ್ಷ ರೂ.ಪರಿಹಾರವನ್ನು ಕೊಡಬೇಕಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣ ಸಹಸ್ರಾರು ಜನರು ಸಾವು ನೋವಿಗೆ ತುತ್ತಾದರು. ಅದೇ ಪರಿಸ್ಥಿತಿ ಈ ರಾಜ್ಯದಲ್ಲಿ ಬರಬಾರದು. ಸರಕಾರ ಚಾಮುಂಡಿ ಬೆಟ್ಟದಲ್ಲಿ ಅಥವಾ ಅರಮನೆಯಲ್ಲಿ ಸರಳ ಸಂಪ್ರದಾಯ ಪೂಜೆಗಳನ್ನು ನಡೆಸಿಕೊಳ್ಳಲಿ. ಅನಾವಶ್ಯಕ ಮೆರವಣಿಗೆ ಜನಾಕರ್ಷಣೆಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಿ, ಇಲ್ಲದಿದ್ದರೆ ಇದು ಜನದ್ರೋಹಿ ಸರಕಾರವಾಗುತ್ತದೆ ಎಂಬುದನ್ನು ಅರಿಯಲಿ ಎಂದು ಕುರುಬೂರು ಶಾಂತಕುಮಾರ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News