ಟೋಲ್ ಶುಲ್ಕ ನೀಡುವ ವಿಚಾರಕ್ಕೆ ಕಲಹ: ಸಿಬ್ಬಂದಿಯ ಕೊಲೆ

Update: 2020-10-12 18:34 GMT

ಮೈಸೂರು,ಅ.12: ಟೋಲ್ ಶುಲ್ಕ ನೀಡುವ ವಿಚಾರವಾಗಿ ಆರಂಭಗೊಂಡ ಕಲಹ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯ ಕಡಕೊಳ ಟೋಲ್ ಗೇಟ್ ಬಳಿ ನಡೆದಿದೆ.

ಕಡಕೊಳ ನಿವಾಸಿ ಗಣೇಶ್ ಕೊಲೆಯಾದ ಸಿಬ್ಬಂದಿ. ಟೋಲ್ ಸಂಗ್ರಹಣೆ ವಿಚಾರದಲ್ಲಿ ನಾಲ್ಕೈದು ಮಂದಿಯ ತಂಡದಿಂದ ಆರಂಭವಾದ ಗಲಾಟೆ ಗಣೇಶನ ಕೊಲೆಯಲ್ಲಿ ಅಂತ್ಯವಾಗಿದೆ.

ಯುವಕರ ತಂಡವೊಂದು ನಂಜನಗೂಡಿಗೆ ತೆರಳಿ, ಅಲ್ಲಿಂದ ಮೈಸೂರಿಗೆ ವಾಪಸಾಗುವ ವೇಳೆ ಟೋಲ್ ಸಿಬ್ಬಂದಿ ಗಣೇಶ್ ಶುಲ್ಕ ಕೇಳಿದ್ದಾರೆ. ಈ ವಿಚಾರವಾಗಿ ರವಿವಾರ ತಡರಾತ್ರಿ ಟೋಲ್‍ನಲ್ಲಿ ಗಲಾಟೆ ಶುರುವಾಗಿದೆ. ಆಗ ಯುವಕರ ಗುಂಪು, ಗಣೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಬಳಿಕ ಗಣೇಶ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಣೇಶ್ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News