ಸಂವೇದನಾ ರಹಿತ ಸರಕಾರ ಅಧಿಕಾರದಲ್ಲಿದೆ: ಈಶ್ವರ್ ಖಂಡ್ರೆ ಕಿಡಿ

Update: 2020-10-19 12:15 GMT

ಬೆಂಗಳೂರು, ಅ.19: ಕಲ್ಯಾಣ ಕರ್ನಾಟಕವು ಭೀಕರ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದರೂ, ಸರಕಾರ ಕಣ್ಣು, ಕಿವಿ, ಹೃದಯವಿಲ್ಲದ ದಪ್ಪ ಚರ್ಮದ ಸಂವೇದನಾ ರಹಿತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭೀಕರ ಪ್ರವಾಹದಿಂದಾಗಿ ಕಲ್ಯಾಣ ಕರ್ಣಾಟಕದ ಎಲ್ಲಾ ಜಿಲ್ಲೆಗಳು ತತ್ತರಿಸಿ ಹೋಗಿವೆ. ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವೈಮಾನಿಕ ಸಮೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಹೆಸರೇ ಇಲ್ಲ. ಯಾಕೆ ಬೀದರ್ ಜಿಲ್ಲೆಯಲ್ಲಿ ನಷ್ಟ ಆಗಿಲ್ಲವೇ, ಪ್ರವಾಹ ಬಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಆಗಿದ್ದ 3.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಸುಮಾರು 2.47 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿರುವುದು ಸರಕಾರಕ್ಕೆ ಕಾಣುತ್ತಿಲ್ಲವೆ? ಮುಖ್ಯಮಂತ್ರಿಗಳು ಯಾಕೆ ಬೀದರ್ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದ್ದಾರೆ? ಯಡಿಯೂರಪ್ಪನವರು ಬೀದರ್ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಾನು ಸರಕಾರಕ್ಕೆ ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗವಾದ ಬೀದರ್ ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಶೇ. 80 ರಷ್ಟು ಬೆಳೆಹಾನಿ ಉಂಟಾಗಿದೆ. ಹಾಗಾಗಿ ವೈಮಾನಿಕ ಸಮೀಕ್ಷೆಯಲ್ಲಿ ಬೀದರ್ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News