ಪಾಪದ ಹಣ ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ: ವಿಜಯೇಂದ್ರ ವಿರುದ್ಧ ಎಚ್ಡಿಕೆ ವಾಗ್ದಾಳಿ
Update: 2020-10-19 15:12 GMT
ಬೆಂಗಳೂರು, ಅ. 19: `ಕೆ.ಆರ್.ಪೇಟೆಯಂತೆ ಶಿರಾ ಮುಗಿಸ್ತೀನಿ' ಎಂದು ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ. ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅದೇ ಹಣವನ್ನು ತೆಗೆದುಕೊಂಡು ಹೋಗಿ ಪ್ರವಾಹ ಪರಿಸ್ಥಿತಿಯಿಂದ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು. ಅಲ್ಲಿ ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದ್ರು ಹೋಗಿದ್ದೀರಾ..? ನನಗೆ ಇಷ್ಟೆಲ್ಲಾ ನೋವು ಇದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಜನರು ನನ್ನನ್ನು ಕೈ ಬಿಟ್ಟಿದ್ದರೂ, ಆ ಭಾಗದ ಜನರ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.