ಯತ್ನಾಳ್ ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆ: ಬಿಎಸ್‌ವೈ ವಿರುದ್ಧ ಹೇಳಿಕೆಗೆ ರೇಣುಕಾಚಾರ್ಯ ಗರಂ

Update: 2020-10-20 12:25 GMT

ಬೆಂಗಳೂರು, ಅ.20: ರಾಜ್ಯದಲ್ಲಿ ಮುಖ್ಯಮಂತ್ರಿ ಸೀಟು ಖಾಲಿ ಇಲ್ಲ, ಯತ್ನಾಳ್ ಅವರೇ ನೀವು ಯಡಿಯೂರಪ್ಪರನ್ನು ಟೀಕಿಸಿದ ಮಾತ್ರಕ್ಕೆ ಅವರ ವರ್ಚಸ್ಸು ಕಡೆಮೆಯಾಗಲ್ಲ. ಬದಲಿಗೆ ನಿಮ್ಮ ವರ್ಚಸ್ಸು ಕಡಿಮೆಯಾಗತ್ತೆ. ನೀವೊಬ್ಬ ಹಿರಿಯ ನಾಯಕರಾಗಿ ಇಂತಹ ಹೇಳಿಕೆಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯಡಿಯೂರಪ್ಪ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಯೇ ವಿನಃ ಅದು ಉತ್ತರ ಕರ್ನಾಟಕ ಭಾಗದ ಶಾಸಕರ ಹೇಳಿಕೆ ಅಲ್ಲ. ಅವರು ಮುಖ್ಯಮಂತ್ರಿಯಾಗಲು ಹಗಲುಗನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಆಲದ ಮರದ ಇದ್ದಂತೆ. ಆಲದ ಮರದ ಕೆಳಗೆ ಇದ್ದು ನಾವು ರಾಜಕಾರಣ ಮಾಡಬೇಕು ಎಂದು ತಿಳಿಸಿದ್ದಾರೆ

ಉತ್ತರ ಕರ್ನಾಟಕ ಭಾಗದವರ ಸಿಎಂ ಮಾಡೋ ಬಗ್ಗೆ ಚರ್ಚೆಯಾಗಿಲ್ಲ. ಯಾರೇ ಇಂತಹ ಹೇಳಿಕೆ ನೀಡಿದರು ಪಕ್ಷ ಸೂಕ್ಷ್ಮವಾಗಿ ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಯತ್ನಾಳ್ ಹೇಳಿಕೆಯಲ್ಲಿ ಬಿಜೆಪಿಯ ಯಾವುದೇ ನಾಯಕರ ಪಾತ್ರ ಇಲ್ಲ. ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಅಭಿವೃದ್ಧಿಯ ವಿಷಯದಲ್ಲಿ ಯಡಿಯೂರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News