ಮಾರುತಿ ಮಾನ್ಪಡೆ ನಿಧನ: ಕುಮಾರಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಹಲವರಿಂದ ಸಂತಾಪ
Update: 2020-10-20 17:11 GMT
ಬೆಂಗಳೂರು, ಅ.20: ರೈತ-ಕಾರ್ಮಿಕರ ಕೂಗಾಗಿದ್ದ ಹಿರಿಯ ರೈತ ನಾಯಕ ಮಾರುತಿ ಮಾನ್ಪಡೆ ಕೋವಿಡ್ನಿಂದ ನಿಧನರಾಗಿರುವುದು ವೇದನೆ ತರಿಸಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಂಸದ ಡಾ.ಉಮೇಶ್ ಜಾದವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಾದರೂ ರೈತರು ಮತ್ತು ಕಾರ್ಮಿಕರ ಪರ ದನಿ ಎತ್ತುತ್ತಿದ್ದ ಮಾನ್ಪಡೆ, ಅತ್ಯಂತ ಸರಳ ಮತ್ತು ಸ್ನೇಹಜೀವಿಯಾಗಿದ್ದರು. ಅವರ ನಿಧನದಿಂದ ರೈತ ಮತ್ತು ಕಾರ್ಮಿಕ ಚಳವಳಿಗೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿ, ಹಿರಿಯ ನಾಯಕ ಮಾರುತಿ ಮಾನ್ಪಡೆ ನಿಧನ ಅತೀವ ದುಃಖ ತಂದಿದೆ. ಕರ್ನಾಟಕ ರಾಜಕಾರಣ ಮತ್ತು ಜನಪರ ಚಳವಳಿ ಬದ್ಧತೆಯ ನಾಯನನೋರ್ವನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ತಿಳಿಸಿದ್ದಾರೆ.