ತೆಲಂಗಾಣದ ಮಾಜಿ ಗೃಹ ಸಚಿವ ನರಸಿಂಹ ರೆಡ್ಡಿ ನಿಧನ
ಹೈದರಾಬಾದ್: ತೆಲಂಗಾಣದ ಮಾಜಿ ಗೃಹ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ನರಸಿಂಹ ರೆಡ್ಡಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿಧನರಾದರು. ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದ ರೆಡ್ಡಿ ಆನಂತರ ಆರೋಗ್ಯ ಹದಗೆಟ್ಟ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ನಯಿನಿ ನರಸಿಂಹ ರೆಡ್ಡಿ ರಾತ್ರಿ 12:25ರ ಸುಮಾರಿಗೆ ಮೃತಪಟ್ಟಿದ್ದು, ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶ್ವಾಸಕೋಶದಲ್ಲಿ ತೀವ್ರ ಹಾನಿಯಾಗಿತ್ತು ಎಂದು ಅಪೋಲೊ ಆಸ್ಪತ್ರೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರೆಡ್ಡಿ ನಿಧನಕ್ಕೆ ದುಃಖವ್ಯಕ್ತಪಡಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಹಾಗೂ ರಾಜ್ಯ ಸರಕಾರದ ಸಚಿವರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡರು.
ರೆಡ್ಡಿ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಬಳಿಕ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ರಾವ್ ಅವರು ರೆಡ್ಡಿ ಕುಟುಂಬಕ್ಕೆ ಸಮಾಧಾನ ಹೇಳಿದ್ದರು.
86ರ ವಯಸ್ಸಿನ ರೆಡ್ಡಿ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಪಕ್ಷದ ಸ್ಥಾಪಕ ನಾಯಕರಾಗಿದ್ದರು. 2014 ಹಾಗೂ 2018ರ ನಡುವೆ ಹೊಸ ರಾಜ್ಯದ ಮೊದಲ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.