ಸಾಕಾನೆಯ ಮೇಲೆ ಸವಾರಿ: ನಟ ಧನ್ವೀರ್ ಸೇರಿ ಆರು ಮಂದಿಯ ವಿರುದ್ಧ ಎಫ್‍ಐಆರ್

Update: 2020-10-24 15:33 GMT

ಮೈಸೂರು,ಅ.24: ಅರಣ್ಯ ಇಲಾಖೆ ಅನುಮತಿ ಪಡೆಯದೇ ಮತ್ತಿಗೋಡು ಆನೆ ಶಿಬಿರಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ಆರೋಪದ ಮೇಲೆ ನಟ ಧನ್ವೀರ್ ಸೇರಿ ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ ನಟ ಧನ್ವೀರ್ 1ನೇ ಆರೋಪಿಯಾಗಿದ್ದು, ಸಫಾರಿ ವೇಳೆ ಜೊತೆಯಲ್ಲಿದ್ದ ವಿಶ್ವಾಸ್ ಐಯ್ಯರ್ ಮತ್ತು ದರ್ಶನ್ ಬಿನ್ ನಂದಕುಮಾರ್ ಹಾಗೂ ಹೆಸರು ಪತ್ತೆಯಾಗದ ಇನ್ನೂ ಮೂವರ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಎಫ್ಐಆರ್ ದಾಖಲಾಗಿದೆ.

ಅಕ್ಟೋಬರ್ 23 ರಂದು ಆನೇಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಆನೆ ಶಿಬಿರಕ್ಕೆ ನಟ ಧನ್ವೀರ್ ಹಾಗೂ ಸ್ನೇಹಿತರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಚಿತ್ರರಂಗದ ತಾರೆಯರು ಎಂದು ಹೇಳಿಕೊಂಡು ಪ್ರವೇಶ ಮಾಡಿದ್ದು, ಈ ವೇಳೆ ಮಹೇಂದ್ರ ಎಂಬ ಸಾಕಾನೆಯ ಮೇಲೆ ಸವಾರಿ ಮಾಡಿದ್ದಾರೆ. ಜೊತೆಗೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಅಂತರ್ಜಾಲದಲ್ಲಿ ವೈರಲ್ ಆಗಿರುವ ಬಗ್ಗೆ ಮಾಹಿತಿ ಪಡೆದು ಅಕ್ರಮವಾಗಿ ಪ್ರವೇಶ ಮಾಡಿದ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಈ ಪ್ರಕರಣದಲ್ಲಿ ಮತ್ತಿಗೋಡು ಆನೆ ಶಿಬಿರ ಉಸ್ತುವಾರಿ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದು ಸಿಬ್ಬಂದಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ಕೈಗೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News