ಸಿದ್ದರಾಮಯ್ಯರಿಗೆ ಬಿಜೆಪಿಯ ಕೇಂದ್ರದ ನಾಯಕರ ಜೊತೆ ಸಂಪರ್ಕ: ಸಂಸದ ಪ್ರತಾಪ್ ಸಿಂಹ

Update: 2020-11-10 14:07 GMT

ಮೈಸೂರು,ನ.10: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಬಗ್ಗೆ ಗುಮಾನಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಮ್ಮ ಪಕ್ಷದ ವಿಚಾರ ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಯಾವ ಮೂಲದಿಂದ ಇದು ಗೊತ್ತಾಗಿದೆ ಎಂದು ತಿಳಿದಿಲ್ಲ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕ ಸಾಧಿಸಿರಬಹುದು. ಕಾಂಗ್ರೆಸ್‍ನಲ್ಲಿ ನನಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರಬಹುದು. ಇದರಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿರಬಹುದು. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಾಳಾದರೂ ಸರಿ ಡಿ.ಕೆ.ಶಿವಕುಮಾರ್ ಗೆ ಯಾವುದೇ ಸ್ಥಾನ ಸಿಗಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ. ಅದೇ ಕಾರಣಕ್ಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಕಾಂಗ್ರೆಸ್ ಪರಂಪರೆ. ಇದು ಸಿದ್ದರಾಮಯ್ಯಗೆ ಗೊತ್ತಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಇದನ್ನು ತಪ್ಪಿಸಲು ಡಿಕೆಶಿ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಆದರೆ, ಪರಮೇಶ್ವರ್ ಅವರನ್ನು ಸೋಲಿಸಿದಂತೆ ಶಿವಕುಮಾರ್ ಸೋಲಿಸಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹೀಗಾಗಿ, ಪಕ್ಷದ ಹಿನ್ನೆಡೆಗೆ ಅವರೇ ಕಾರಣರಾಗುತ್ತಿದ್ದಾರೆ ಎಂದು ಟೀಕಿಸಿದರು.

ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅಧಿಕಾರ ದುರುಪಯೋಗ ಸಂಬಂಧ ಕಾಂಗ್ರೆಸ್ ಆರೋಪವನ್ನು ಅಲ್ಲೆಗಳೆದು ಮಾತನಾಡಿದ ಅವರು, ಕಾಂಗ್ರೆಸ್ ಸೋತಾಗ ಮಾತ್ರ ಅವರಿಗೆ ಇವಿಎಂ ನೆನಪಾಗುತ್ತದೆ. ಅವರು ಗೆದ್ದ ಕಡೆ ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉಪ ಚುನಾವಣೆಯಲ್ಲಿ ಮಾಡಿದ್ದೇನು? ನಂಜನಗೂಡು, ಚಾಮರಾಜನಗರ ಉಪಚುನಾವಣೆ ಹೇಗೆ ಗೆದ್ದರು? ಉಪ ಚುನಾವಣೆ ಹೇಗೆ ಮಾಡಬೇಕು ಅಂತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರೇ ಕಾಂಗ್ರೆಸ್ ನವರು. ಉಪಚುನಾವಣೆಯಲ್ಲಿ ಎಲ್ಲ ಬಲಗಳು ಬಳಕೆಯಾಗುವುದು ಸಹಜ ಎಂದು ತಿರುಗೇಟು ನೀಡಿದರು.

ಎರಡು ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಿದ್ದೇವೆ. ಶಿರಾದಲ್ಲಿ 70 ವರ್ಷದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ಸಂಘಟಿತರಾಗಿ ಹೋರಾಟ ಮಾಡಿದ್ದಕ್ಕೆ ಗೆಲುವು ಸಾಧ್ಯವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News