ಕಾಂಗ್ರೆಸ್ ಅಪರಾಧಿಗಳಿಂದ ಕೂಡಿರುವ ಪಕ್ಷ: ಬಿಜೆಪಿ ಆರೋಪ
Update: 2020-11-13 14:15 GMT
ಬೆಂಗಳೂರು, ನ. 13: `ರಾಜ್ಯ ಕಾಂಗ್ರೆಸ್ ಆರೋಪಿ ಮತ್ತು ಅಪರಾಧಿಗಳಿಂದ ಕೂಡಿರುವ ಒಂದು ಪಕ್ಷವಾಗಿದೆ' ಎಂದು ಬಿಜೆಪಿ ಆರೋಪ ಮಾಡಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ದಲಿತ ಶಾಸಕನನ್ನು ರಕ್ಷಿಸಲಾಗದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲುಕ್ ಔಟ್ ನೋಟಿಸ್ ಜಾರಿಯಾಗಿರುವ ಬೆಂಗಳೂರು ಗಲಭೆ ಆರೋಪಿ ಸಂಪತ್ ರಾಜ್ ಮತ್ತು ಕೊಲೆ ಆರೋಪಿ ವಿನಯ್ ಕುಲಕರ್ಣಿ ಅವರನ್ನು ರಕ್ಷಿಸಲು ಅತ್ಯುತ್ಸಾಹ ತೋರುತ್ತಿದ್ದಾರೆ' ಎಂದು ಟೀಕಿಸಿದೆ.
`ಸಿಎಂ ಆಗಿದ್ದುಕೊಂಡು ಸ್ವಕ್ಷೇತ್ರದಲ್ಲಿ ಸೋತು, ಬಾದಾಮಿಯಲ್ಲಿ ಅಲ್ಪ ಮತದಿಂದ ಗೆದ್ದ ಸಿದ್ದರಾಮಯ್ಯ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್, ಈ ಇಬ್ಬರೂ ಮೇರು ನಾಯಕರ ಪಾದದ ಧೂಳನ್ನು ನೀವೇ ಸಂಗ್ರಹಿಸಿಟ್ಟುಕೊಳ್ಳಿ. ಇವರು ಕಾಂಗ್ರೆಸ್ ಪಕ್ಷವನ್ನು ಗುಂಡಿ ತೋಡಿ ಮಲಗಿಸಿದಾಗ ಮುಚ್ಚಲು ಬೇಕಾಗುತ್ತದೆ' ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದೆ.