ವಾಯುಭಾರ ಕುಸಿತ: ನ.17ರವರೆಗೆ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

Update: 2020-11-13 16:01 GMT

ಬೆಂಗಳೂರು, ನ.13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ನ.17ರವರೆಗೆ ಕೆಲವು ಕಡೆಗಳಲ್ಲಿ ತುಂತುರು ಮಳೆ ಸುರಿದರೆ, ಹಲವೆಡೆ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನ.16ವರೆಗೆ ಸಾಮಾನ್ಯ ಮಳೆ ಬೀಳಲಿದೆ. ನ.17ರಂದು ಪುನಃ ಕರಾವಳಿ ಭಾಗದಲ್ಲೇ ಮಳೆ ತುಸು ಚುರುಕಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನ.15ರವರೆಗೆ ತುಂತುರು ಮಳೆ ಹಾಗೂ 16ರಂದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ. ಇನ್ನು ಹಿಂಗಾರು ಆರಂಭ ಆದಾಗಿನಿಂದಲೂ ಒಣ ಹವೆ ವಾತಾವರಣ ಕಂಡು ಬರುತ್ತಿರುವ ಉತ್ತರ ಒಳನಾಡು ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನ.17ರವರೆಗೂ ಮತ್ತದೇ ಒಣಹವೆ ವಾತಾವರಣ ಮುಂದುವರಿಯಲಿದೆ.

ನ.13ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಒಂದು ಸೆಂ.ಮೀ. ಮಳೆ ಸುರಿದಿದೆ. ಇದರ ಹೊರತಾಗಿ ರಾಜ್ಯದಲ್ಲಿ ಎಲ್ಲಿಯೂ ದಾಖಲೆಯ ಮಳೆಯಾಗಿಲ್ಲ. ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಕಡೆಗಳಲ್ಲಿ ಮೋಡ ಮುಸುಕಿನ ವಾತಾವರಣ ಮತ್ತು ಅಲ್ಲಲ್ಲಿ ತುಂತುರು ಮಳೆ ದಾಖಲಾಯಿತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News