ಮಾತೆ ಮೇರಿಯ ಗೋಪುರದಲ್ಲಿ ಟಿಪ್ಪು-ಹೈದರಾಲಿಯ ಹೆಸರು..!!

Update: 2020-11-20 09:01 GMT

ಮಂಗಳೂರಿನಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಹತ್ತು ಕಿಲೋ ಮೀಟರ್ ಕ್ರಮಿಸಿದರೆ ಸದಾ ಜನಜಂಗುಳಿಯಿಂದ ಗಿಜಿಗಿಡುವ ಒಂದು ಪುಟ್ಟ ಪೇಟೆ ಸಿಗುತ್ತದೆ. ಬಂಟ್ವಾಳ ತಾಲೂಕಿನ ವ್ಯಾಪ್ತಿಗೊಳಪಡುವ ಆ ಪೇಟೆಯ ಹೆಸರು ಫರಂಗಿಪೇಟೆ.

ಈ ಫರಂಗಿಪೇಟೆ ಎಂಬ ಹೆಸರಿಗೊಂದು ಹಿನ್ನೆಲೆಯಿದೆ. ಬಾಸೆಲ್ ಮಿಶನ್‌ನವರು ಮಂಗಳೂರು ನಗರದ ಬಲ್ಮಠದಲ್ಲಿರುವ ಥಿಯೋಲೋಜಿಕಲ್ ಕಾಲೇಜಿನಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ನಡೆಸಿದ್ದ ವಸ್ತುಪ್ರದರ್ಶನ ಮತ್ತು ಐತಿಹಾಸಿಕ ಚಿತ್ರಗಳ ಪ್ರದರ್ಶನದಲ್ಲಿ ದಾಖಲಿಸಿದ್ದ ಪ್ರಕಾರ ಫರಂಗಿಪೇಟೆಯಲ್ಲಿ ಎರಡು‌ ಶತಮಾನಗಳ ಹಿಂದೆಯೇ ಫಿರಂಗಿಗಳನ್ನು ಸಮರಕ್ಕೆ ಸಿದ್ಧಗೊಳಿಸಿಡುವ ಸ್ಥಳವಿತ್ತಂತೆ. ಆದುದರಿಂದ ಆ ಪೇಟೆಗೆ ಫಿರಂಗಿಪೇಟೆ ಎಂಬ ಹೆಸರು ಬಂತು. ಕ್ರಮೇಣ ಅದು ಅಪಭ್ರಂಶಗೊಂಡು ಫರಂಗಿಪೇಟೆ ಆಯಿತು.

ಮಂಗಳೂರಿನಿಂದ  ಸಾಗುವ ಹೆದ್ದಾರಿಯ ಬಲಬದಿಗೆ ನೇತ್ರಾವತಿ ನದಿಯೂ , ಬಲ ಬದಿಗೆ ಗುಡ್ಡ ಬೆಟ್ಟಗಳಿಂದಾವೃತವಾದ ಒಳನಾಡೂ ಫರಂಗಿಪೇಟೆಯಲ್ಲಿದೆ. ನೇತ್ರಾವತಿಯ ತಟದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಕಪೋಚಿನ್ ಎಂಬ ವಿಶಿಷ್ಟ ಶ್ರೇಣಿಯ ಸನ್ಯಾಸಿ-ಸನ್ಯಾಸಿನಿಯರ ಪ್ರಾರ್ಥನಾ ಮಂದಿರವೊಂದಿದೆ. ಅದು ಕ್ಯಾಥೋಲಿಕ್ ಸಮುದಾಯ ಬಹುವಾಗಿ ಗೌರವಿಸುವ ಮಂದಿರವೂ ಹೌದು. ಆ ಪ್ರಾರ್ಥನಾ ಮಂದಿರದ ಹೆಸರು "St.Fedelis Friary Monte Mariano".  ಸದ್ರಿ ಮಂದಿರದ ಪ್ರವೇಶ ದ್ವಾರದ ಒಳಹೊಕ್ಕಾಗಲೇ ಮಾತೆ ಮೇರಿಯ ಮೂರ್ತಿಯಿರುವ ಗೋಪುರವೊಂದು ಕಾಣಸಿಗುತ್ತದೆ. ಆ ಗೋಪುರದಲ್ಲಿ " At the feet of this statue of Mary the soldiers of Hydar Ali and those of Tippu Sultan were lighting the candles" ಎಂದು ಬರೆದಿರುವುದನ್ನು ನಾವು ಇಂದಿಗೂ ಕಾಣಲು ಸಾಧ್ಯ. ಅರ್ಥಾತ್ " ಮೇರಿಯ ಈ ಮೂರ್ತಿಯ ಪಾದ ಭಾಗದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಸೈನಿಕರು ಮೋಂಬತ್ತಿ ಬೆಳಗಿಸುತ್ತಿದ್ದರು". 

ಇದರಿಂದ ನಾವು ತಿಳಿದುಕೊಳ್ಳಬಹುದಾದ ವಿಚಾರವೇನೆಂದರೆ ಟಿಪ್ಪು ಮತ್ತು ಹೈದರಾಲಿಯ ಸೇನೆಯಲ್ಲಿ ಧಾರಾಳವಾಗಿ ಕ್ರೈಸ್ತ ಧರ್ಮೀಯ ಸೈನಿಕರಿದ್ದರು ಅಥವಾ ಕ್ರೈಸ್ತ ನಂಬಿಕೆಗಳನ್ನು ಗೌರವಿಸುವ ಸೈನಿಕರಿದ್ದರು. ಇದು ಟಿಪ್ಪುವನ್ನು‌ ಕ್ರೈಸ್ತ ವಿರೋಧಿಯೆಂದು ಅಪಪ್ರಚಾರ ಮಾಡುವ ವರಿಗೆ ಸಮರ್ಪಕ ಉತ್ತರವೂ ಹೌದು.

ಕ್ರೈಸ್ತ ಸೈನಿಕರನ್ನಿಟ್ಟುಕೊಂಡು ಟಿಪ್ಪು ಮಂಗಳೂರು ಕ್ರೈಸರನ್ನು ಮತಾಂತರ ಮಾಡಿದರು, ಅವರ ಜೊತೆ ಧಾರ್ಮಿಕ ಕಾರಣಕ್ಕಾಗಿ ಕ್ರೂರವಾಗಿ ನಡೆದುಕೊಂಡಿದ್ದರು, ಕ್ರೈಸರ ಮಾರಣ ಹೋಮ ಮಾಡಿದ್ದರು ಎನ್ನುವುದನ್ನು ನಂಬಲು ಸಾಧ್ಯವೇ..? ಒಂದು ವೇಳೆ ಟಿಪ್ಪು ಮಂಗಳೂರು ಕ್ರೈಸ್ತರ ಜೊತೆ ಧಾರ್ಮಿಕ ಕಾರಣಕ್ಕಾಗಿ ಇವೆಲ್ಲಾ ಮಾಡಿದ್ದಿದ್ದರೆ ಅವರ ಸೈನಿಕರು ಮೇರಿಯ ಮೂರ್ತಿಗೆ ಮೋಂಬತ್ತಿ ಬೆಳಗುವುದನ್ನು ಸಹಿಸುತ್ತಿದ್ದರೇ...? ಅದಕ್ಕೆ ಟಿಪ್ಪು ಅನುವು ಮಾಡಿಕೊಡುತ್ತಿದ್ದರೇ..? ಇವಿಷ್ಟಲ್ಲದೇ ಟಿಪ್ಪು ಸದ್ರಿ ಪ್ರಾರ್ಥನಾ ಮಂದಿರಕ್ಕೆ ಸಹಾಯ ಮಾಡಿದುದರ ಬಗೆಯೂ ಸದ್ರಿ ಮಂದಿರದಲ್ಲಿ ದಾಖಲೆಗಳಿವೆ.

ಟಿಪ್ಪು ಮಂಗಳೂರಿನ ಕೆಲ ಕ್ರೈಸ್ತರನ್ನು ಶಿಕ್ಷಿಸಿರುವುದೇನೋ ನಿಜ. ಅದು ಕೇವಲ ಕ್ರೈಸ್ತರನ್ನು ಮಾತ್ರವಲ್ಲ. ಮಲಬಾರಿನ ನಾಯರರು, ಕೊಡವರು, ಮಲಬಾರಿನ ಮೆಹ್ದವಿ ಮುಸ್ಲಿಮರನ್ನೂ  ಟಿಪ್ಪು ಶಿಕ್ಷಿಸಿದ್ದಿದೆ.‌ಅದು ರಾಜಕೀಯ ಕಾರಣಕ್ಕಾಗಿಯೇ ಹೊರತು ಅದರಲ್ಲಿ ಧಾರ್ಮಿಕ ವೈರತ್ವದ ಲವಲೇಶವೂ ಇರಲಿಲ್ಲ. ಟಿಪ್ಪುವಿನ ಶತ್ರುಗಳಾದ ಬ್ರಿಟಿಷರ ಜೊತೆ ಕೈ ಜೋಡಿಸಿದವರನ್ನು ಮಾತ್ರ ಟಿಪ್ಪು ಶಿಕ್ಷಿಸಿದ್ದು. ಅಂತಹ ಸಂದರ್ಭಗಳಲ್ಲಿ ಟಿಪ್ಪು ಅವರ ಧರ್ಮ ನೋಡಿ ಶಿಕ್ಷಿಸಿದ್ದಲ್ಲ. ರಾಜಪ್ರಭುತ್ವದ ಕಾಲದಲ್ಲಿ ತನ್ನ ರಾಜ್ಯದ ವಿರುದ್ಧ ಕೆಲಸ ಮಾಡುವವರನ್ನು, ತನ್ನ ಶತ್ರುಗಳಿಗೆ ಅನುಕೂಲ ಮಾಡಿಕೊಡುವವರನ್ನು ಯಾವನೇ ರಾಜನಾದರೂ ಸಹಿಸಲು ಸಾಧ್ಯವೇ...?

Writer - ​ಇಸ್ಮತ್ ಪಜೀರ್

contributor

Editor - ​ಇಸ್ಮತ್ ಪಜೀರ್

contributor

Similar News