ಹಿಂದಿನ ಸರಕಾರದಲ್ಲಿ ಸಚಿವನಾಗಿದ್ದೆ, ಏಕೋ ನನ್ನ ಹಣೆಬರಹವೇ ಸರಿಯಾಗಿಲ್ಲ: ಎಂಟಿಬಿ ನಾಗರಾಜ್

Update: 2020-11-28 13:46 GMT

ಬೆಂಗಳೂರು, ನ. 28: ನಾನು ಹಿಂದಿನ ಸರಕಾರದಲ್ಲಿ ಸಚಿವನಾಗಿದ್ದೆ, ರಾಜೀನಾಮೆ ನೀಡಿ ಇದೀಗ ಮಾಜಿ ಆಗಿದ್ದೇನೆ. ಏಕೋ ಏನೋ ನನ್ನ ಹಣೆಬರಹವೇ ಸರಿಯಾಗಿಲ್ಲ. ಹೀಗಾಗಿ ನಾನು ಇನ್ನೂ ಸಚಿವನಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಇಂದಿಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮೇಲ್ಮನೆ ಸದಸ್ಯನಾಗಿ ಐದು ತಿಂಗಳು ಕಳೆಯಿತು. ಆದರೂ, ನನಗೆ ಇನ್ನೂ ಮಂತ್ರಿ ಆಗುವ ಅದೃಷ್ಟ ಕೂಡಿಬಂದಿಲ್ಲ. ಅದೃಷ್ಟ ಯಾವಾಗ ಕೂಡಿಬರುತ್ತದೆಯೋ ಕಾದುನೋಡೋಣ ಎಂದು ಹೇಳಿದರು.

ದಿಲ್ಲಿಗೆ ತೆರಳೋಣ ಎಂದು ನಾನೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಿದ್ದೇನೆ. ಆದರೆ, ಅವರು ಬಿಡುವು ಮಾಡಿಕೊಂಡು ಹೋಗಿ ಬರೋಣ ಎಂದು ಹೇಳಿದ್ದಾರೆ. ಯಾವಾಗ ಸಮಯ ಕೂಡಿಬರುತ್ತದೆಯೋ ಗೊತ್ತಿಲ್ಲ. ಅಲ್ಲಿಯವರೆಗೂ ಕಾಯಬೇಕಾಗುತ್ತದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ಕೆಲವರ ಹಣೆಬರಹ ಚೆನ್ನಾಗಿದೆ. ಹೀಗಾಗಿ ಅವರೆಲ್ಲ ಬೇಗ ಸಚಿವರಾಗಿದ್ದಾರೆ. ನನ್ನ ಹಣೆಬರಹ ನೆಟ್ಟಗಿಲ್ಲದ ಕಾರಣ ನನಗೆ ಮಂತ್ರಿ ಆಗುವ ಯೋಗ ಬಂದಿಲ್ಲ ಎಂದ ಅವರು, ನಿನ್ನೆ ನಾವು ನಡೆಸಿದ ಸಭೆ ವಿಶೇಷವೇನು ಇಲ್ಲ. ನಾವೆಲ್ಲರೂ ಭೇಟಿಯಾಗುತ್ತಿರುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News