ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ ಎಚ್.ವಿಶ್ವನಾಥ್

Update: 2020-11-28 15:15 GMT

ಬಳ್ಳಾರಿ, ನ. 28: ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡದ ಮುಖ್ಯಮಂತ್ರಿ ಯಡಿಯೂರಪ್ಪನವರ ಕ್ರಮ ಪಕ್ಷದ ಆಂತರಿಕ ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ಇಲ್ಲಿನ ಬಿಪಿಎಸ್‍ಸಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ‘ದುಡ್ಡಿಗೆ ಸೋತ ಭಾರತ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಪ್ಪತ್ತು ವರ್ಷಗಳಿಂದ ಸಿಎಂ ಆದವರು ಪೂರ್ಣಪ್ರಮಾಣದಲ್ಲಿ ಮಂತ್ರಿ ಮಂಡಲ ರಚಿಸುತ್ತಿಲ್ಲ. ಇದು ಆಂತರಿಕ ಪ್ರಜಾಸತ್ತೆಯನ್ನು ನಾಶ ಮಾಡಿ ಗುಲಾಮಗಿರಿ ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಚಿವ ಸಂಪುಟ ರಚಿಸಿದಾಗಲೆಲ್ಲ ನಾಲ್ಕೈದು ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡದೆ ಇರುವುದರಿಂದ ಮಂತ್ರಿ ಪದವಿ ಆಕಾಂಕ್ಷಿಗಳು ಅಧಿಕಾರ ಇಂದಲ್ಲ, ನಾಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಧ್ವನಿ ಕಳೆದುಕೊಳ್ಳುತ್ತಾರೆ. ಇದು ಏಕಕಾಲಕ್ಕೆ ಸರಕಾರದ ಭದ್ರತೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಪ್ರಗತಿಗೆ ಅಡ್ಡಗಾಲಾಗುತ್ತದೆ. ಅಭಿವೃದ್ಧಿಯ ಕಡೆಗಿನ ಓಟ ಕುಂಠಿತವಾಗುವಂತೆ ಮಾಡುತ್ತದೆ. ಹೀಗೆ ಆಂತರಿಕ ಪ್ರಜಾಸತ್ತೆಯನ್ನು ನಾಶವಾಗುವುದು ಒಳ್ಳೆಯದಲ್ಲ. ಪ್ರತಿಯೊಂದು ರಾಜಕೀಯ ಪಕ್ಷಗಳಲ್ಲೂ ಆಂತರಿಕ ಪ್ರಜಾಸತ್ತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದುಬಂದಿದೆ ಎಂದ ಅವರು, ಇವತ್ತು ಸಿಎಂ ಯಡಿಯೂರಪ್ಪ, ಮತ್ತವರ ಮಗನ ಬಳಿ, ದೇವೇಗೌಡ-ಕುಮಾರಸ್ವಾಮಿ ಬಳಿ, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬಳಿ ಆಂತರಿಕ ಪ್ರಜಾಸತ್ತೆಯ ಮಾತನಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇವತ್ತು ಮುಖ್ಯಮಂತ್ರಿಗಳಾದವರು ತಮ್ಮ ಕೈಲಿ ಹಲವು ಖಾತೆಗಳನ್ನು ಒಟ್ಟಿಗೆ ಇಟ್ಟುಕೊಂಡು ಅವು ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತಾರೆ. ನಾನು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಇದನ್ನೇ ಹೇಳಿದ್ದೆ. ಆದರೆ, ಇದರಿಂದ ಅವರು ಕೋಪಗೊಂಡು ನಾನು ಕೆಲಸ ಮಾಡಲು ಅಶಕ್ತನೇ ಎಂದು ಪ್ರಶ್ನಿಸಿದ್ದರು ಎಂದು ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.

ನಾನು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು ಪಕ್ಷದ ನಾಯಕರ ಧೋರಣೆಯ ವಿರುದ್ಧವೇ ಹೊರತು ಹಣದಾಸೆಗಾಗಿ ಅಲ್ಲ. ಅದ್ಯಾರೋ ಅಯೋಗ್ಯ ನಾನು ಇಪ್ಪತ್ತೈದು ಕೋಟಿ ರೂ.ಗಳಿಗೆ ಮಾರಾಟವಾಗಿರುವುದಾಗಿ ಹೇಳಿದ. ಅದನ್ನೇ ಎಲ್ಲರೂ ನಂಬಿದರು. ನನ್ನನ್ನು ನಾಶ ಮಾಡಲು ಹೊರಟರು. ಆದರೆ, ನಾಯಕನನ್ನು ಹೀಗೆ ನಾಶ ಮಾಡುವ ಯತ್ನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಅವರು, ನಾನೊಬ್ಬ ಸುಡುಗಾಡು ಸಿದ್ಧ ಇದ್ದಂತೆ. ನನಗೆ ಕಾಣಿಸುವ ಸತ್ಯವನ್ನು ನಿರ್ಭಿಡೆಯಿಂದ ಹೇಳುತ್ತೇನೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಮೂಗಿಗೆ ತಪ್ಪ ಹಚ್ಚುವ ಕ್ರಮ: ಭಾರತ ಎಷ್ಟೇ ಸೋಲು ಕಾಣಲಿ. ಆದರೆ, ಅದು ಮರಳಿ ತಲೆ ಎತ್ತಿ ನಿಲ್ಲುವಂತೆ ಮಾಡಲು ಮತದಾರನಿಗೆ ಸಾಧ್ಯವಿದೆ. ಆದರೆ ಅಂತಹ ಮತದಾರನನ್ನು ರಾಜಕೀಯ ವ್ಯವಸ್ಥೆ ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಶ್ನಿಸಿದ ಅವರು, ಇವತ್ತು ಜಾತಿ, ಮತ, ಪಂಥಕ್ಕೊಂದು ಎಂಬಂತೆ ಪ್ರಾಧಿಕಾರ, ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಇದು ಮೂಗಿಗೆ ತುಪ್ಪ ಹಚ್ಚುವ ಕ್ರಮವೇ ಹೊರತು ಇನ್ನೇನಲ್ಲ ಎಂದು ವಾಗ್ದಾಳಿ ನಡೆಸಿದರು.

ಡಿ.ದೇವರಾಜ ಅರಸರಂತಹ ನಾಯಕರು ಮೇಲ್ವರ್ಗದವರನ್ನು ವಿಶ್ವಾಸಕ್ಕೆ ಪಡೆದು ಕೆಳವರ್ಗದವರ ಹಿತ ಕಾಪಾಡಿದರು. ಆದರೆ, ಇವರು ಮೇಲ್ವರ್ಗದವರ ಹಿತ ಕಾಪಾಡುತ್ತೇವೆ ಎಂದು ಹೊರಟಿದ್ದಾರೆ. ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದ್ದವರು ಇಂತಹ ಹೆಜ್ಜೆ ಇಡುವುದಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ಹಾಗೂ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ, ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರ್ರಿಸ್ವಾಮಿ, ಮಹಿಪಾಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ದೇಶದ ಅಲ್ಪಪ್ರಮಾಣದ ಜನ ಬಹುಸಂಖ್ಯಾತರನ್ನು ಶೋಷಿಸಿ ಭಾರತ ದುಡ್ಡಿಗೆ ಸೋಲುವಂತೆ ಮಾಡಿದರು. ಶೋಷಕರು ದುಡ್ಡಿಗಾಗಿ ಶೋಷಣೆ ನಡೆಸಿ ಮಾನವೀಯತೆಯ ನೆಲೆಯಲ್ಲಿ ಸೋತರು. ಬಹುಸಂಖ್ಯಾತರು ತಮ್ಮ ಅಗತ್ಯದಷ್ಟನ್ನು ಗಳಿಸಲಾಗದೆ ನಿರಾಶರಾಗಿ ಸೋತರು.’

-ಆರ್.ಟಿ.ವಿಠ್ಠಲಮೂರ್ತಿ, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News