ಪ್ರತ್ಯೇಕ ಪ್ರಕರಣ: ಅಳಿಯನಿಂದಲೇ ಮಾವನ ಹತ್ಯೆ; ತಂದೆಯನ್ನೇ ಇರಿದು ಕೊಂದ ಪುತ್ರ

Update: 2020-12-11 16:29 GMT

ಪಾಂಡವಪುರ, ಡಿ.11: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವನನ್ನು ಅಳಿಯನೇ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಗ್ರಾಮದ ನಿವಾಸಿ, ಹಾಸನ ಜಿಲ್ಲೆ ಅರಕಲಗೂಡು ಮೂಲದ ಜವರೇಗೌಡ ಅವರ ಪುತ್ರ ಸುರೇಶ್(52) ಹತ್ಯೆಯಾದ ವ್ಯಕ್ತಿ. ಚಿನಕುರಳಿ ಗ್ರಾಮದ ಶಿವಣ್ಣ ಅವರ ಪುತ್ರ ರಘು ಅಲಿಯಾಸ್ ಜಿಮ್ಮಿ(32) ಕೊಲೆ ಆರೋಪಿ.

ಘಟನೆ ವಿವರ: ಆರೋಪಿ ರಘು ಚಿನಕುರಳಿ ಗ್ರಾಮದಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅದೇ ಗ್ರಾಮದ ಸುರೇಶ್ ಅವರ ಮಗಳಾದ ಪಲ್ಲವಿ ಅವರನ್ನು 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿ, ಮಾವನ ಮನೆಯಲ್ಲಿಯೇ ವಾಸವಿದ್ದ ಎನ್ನಲಾಗಿದೆ.

ಗಂಡ-ಹೆಂಡತಿಗೆ ಸಣ್ಣಪುಟ್ಟ ಜಗಳವಾಗಿ 6 ತಿಂಗಳ ಹಿಂದೆ ಮಾವನ ಮನೆಯಿಂದ ಹೊರಹಾಕಲ್ಪಟ್ಟ ರಘು ಇಬ್ಬರು ಮಕ್ಕಳ ಜತೆ ತನ್ನ ಮನೆಗೆ ತೆರಳಿದ್ದು, ಮೂರು ದಿನಗಳ ಹಿಂದೆ ಮಾವನ ಮನೆಗೆ ಮರಳಿದ್ದ. ಆ ದಿನವೇ ಆತನ ಮನೆಗೆ ತೆರಳಿದ್ದ ಅತ್ತೆ, ಮಾವ ಜಗಳವಾಡಿಕೊಂಡು ಇಬ್ಬರು ಮೊಮ್ಮಕ್ಕಳನ್ನು ಮನೆಗೆ ಕರೆತಂದಿದ್ದರು ಎನ್ನಲಾಗಿದೆ.

ಗುರುವಾರ ತಡರಾತ್ರಿ ಸಮಯದಲ್ಲಿ ಕಂಠಪೂರ್ತಿ ಕುಡಿದು ರಘು, ಮಾವ ಸುರೇಶ್ ಅವರ ಮನೆಯ ಮುಂಭಾಗದ ಬಳಿ ಕುಳಿತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಮಾವ ಸುರೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಸುರೇಶ್ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಸುರೇಶ್ ಪುತ್ರ ಪ್ರದೀಪ್ ನೀಡಿದ ದೂರಿನ ಮೇರೆಗೆ ಆರೋಪಿ ರಘುವನ್ನು ದಸ್ತಗಿರಿ ಮಾಡಲಾಗಿದೆ. ಎಸ್ಪಿ ಪರಶುರಾಮ್, ಡಿವೈಎಸ್ಪಿ ಅರುಣ್‍ನಾಗೇಗೌಡ, ಸಿಪಿಐ ಕೆ.ಪ್ರಭಾಕರ್, ಪಿಎಸ್‍ಐ ಪೂಜಾಕುಂಟೋಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಂದೆಯನ್ನೇ ಇರಿದು ಕೊಂದ ಪುತ್ರ:
ತಂದೆ-ತಾಯಿ ನಡುವಿನ ಜಗಳದಿಂದ ಬೇಸತ್ತು ಪುತ್ರನೇ ಸ್ವಂತ ತಂದೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಜರುಗಿದೆ. ದೇವರಾಜು (44) ಹತ್ಯೇಗೀಡಾದವರು. ಪುಟ್ಟ ಅಲಿಯಾಸ್ ಅಪ್ಪು (20) ಕೊಲೆ ಆರೋಪಿ. 

ಪತ್ನಿ ಶೀಲ ಶಂಕಿಸಿ ದೇವರಾಜು ಆಗಾಗ್ಗೆ ಜಗಳವಾಡುತ್ತಿದ್ದು, ಬುಧವಾರ ರಾತ್ರಿಯೂ ಜಗಳವಾಡುತ್ತಿರುವುದನ್ನು ಕಂಡು ಬೇಸತ್ತ ಹಿರಿಯ ಮಗ ಅಪ್ಪು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾದ ಎನ್ನಲಾಗಿದೆ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News