ಮದ್ಯಪಾನ ಸಂಯಮ ಮಂಡಳಿ ಹೆಸರು ಬದಲಾವಣೆಗೆ ಸಿಎಂಗೆ ವೀರೇಂದ್ರ ಹೆಗ್ಗಡೆ ಮನವಿ

Update: 2020-12-12 18:09 GMT

ಬೆಂಗಳೂರು, ಡಿ. 12: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಹೆಸರನ್ನು `ವ್ಯಸನಮುಕ್ತ ಜಾಗೃತಿ ಮತ್ತು ಸಲಹಾ ಮಂಡಳಿ' ಎಂದು ಮರುನಾಮಕರಣ ಮಾಡಿ, ಮಂಡಳಿಯ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ವೀರೇಂದ್ರ ಹೆಗ್ಗಡೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ಮಾದಕ ದ್ರವ್ಯಗಳ ಬಳಕೆ ಮಾಡುವವರು, ದಂಧೆಯಾಗಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಕರ್ನಾಟಕ, ದೇಶಕ್ಕೆ ಮಾದರಿಯಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೋರಾಡುವ ಸಮರ್ಥ ಸಂಸ್ಥೆಯಾಗಿ ಮಂಡಳಿಯನ್ನು ಪ್ರೇರೇಪಿಸಲು ಸರಕಾರ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಯುವ ಸಮಾಜ ಡ್ರಗ್ಸ್ ಹಾವಳಿಗೆ ಸಿಲುಕಿ ತಮ್ಮ ಜೀವನದ ಜೊತೆಗೆ ಸಮಾಜದ ಮತ್ತು ಕುಟುಂಬಗಳ ನೆಮ್ಮದಿಯನ್ನು ಹಾಳು ಮಾಡುತ್ತಿರುವುದನ್ನು ಗಮನಿಸಿದಾಗ ಮಾದಕ ವಸ್ತುಗಳ ಲಭ್ಯತೆ ಮತ್ತು ಬಳಕೆ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢವಾಗುತ್ತದೆ. ಆದುದರಿಂದ ವ್ಯಸನಮುಕ್ತ ಮಾಡುವ ನಿಟ್ಟಿನಲ್ಲಿ ಮದ್ಯಪಾನ ಸಂಯಮ ಮಂಡಳಿಯ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಪತ್ರದಲ್ಲಿ ವೀರೇಂದ್ರ ಹೆಗ್ಗಡೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News