ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೆಗೌಡರ ಸ್ವಭಾವ: ಸಂಸದ ಶ್ರೀನಿವಾಸಪ್ರಸಾದ್

Update: 2020-12-21 18:47 GMT

ಮೈಸೂರು,ಡಿ.21: ಜೆಡಿಎಸ್ ವಿಲೀನ ವಿಚಾರ ದೇವೆಗೌಡರೇ ತೀರ್ಮಾನ ಮಾಡಿದಂತಿದೆ. ದೇವೆಗೌಡರಿಗೆ ನಾನು ವೈಯುಕ್ತಿಕವಾಗಿ ಸಲಹೆ ಕೊಡಲ್ಲ. ಯಾಕಂದರೆ ದೇವೆಗೌಡರು ಯಾವಾಗ ಏನ್ ತೀರ್ಮಾನ ಮಡುತ್ತಾರೊ ಯಾರಿಗೂ ಗೊತ್ತಾಗಲ್ಲ. ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೆಗೌಡರ ಸ್ವಭಾವ ಎಂದು ಸಂಸದ ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು.

ನಗರದ ಜಯಲಕ್ಷ್ಮಿಪುರಂ ನಲ್ಲಿರು ಅವರ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಸದ್ಯದ ಸ್ಥಿತಿಯಲ್ಲಿ ವಿಲೀನ ಕಷ್ಟ ಸಾಧ್ಯ. ವಿಲೀನ, ಹೊಂದಾಣಿಕೆ ಸ್ವರೂಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಜೆಡಿಎಸ್‍ಗೆ ಹತಾಶ ಸ್ಥಿತಿ ಇದೆ. ಬಿಜೆಪಿ ಜೊತೆ ಬರುವುದು ಜೆಡಿಎಸ್ ಗೆ ಅನಿವಾರ್ಯ ಇದೆ. ಜೆಡಿಎಸ್ ತನ್ನ ನೆಲೆಗಳಲ್ಲೇ ಸೋಲು ಕಂಡಿದೆ. ತುಮಕೂರಿನಲ್ಲಿ ಸ್ವತಃ ದೇವೆಗೌಡರೆ ಸೋತರು. ರಾಜಕೀಯ ಭವಿಷ್ಯಕ್ಕಾಗಿ ಅವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯ ಎಂದರು.

ಹೊಂದಾಣಿಕೆ ವಿಚಾರದಲ್ಲಿ ಹೈಕಮಾಂಡ್ ಅವರದ್ದೇ ಅಂತಿಮ. ಕೇವಲ ಎರಡು ಮೂರು ಜಿಲ್ಲೆಗೆ ಸೀಮಿತವಾಗಿರುವ ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟುಕೊಡೋಕೆ ಆಗುತ್ತಾ..? ಎಂದು ಜೆಡಿಎಸ್ ಜೊತೆ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಒಳ ಒಪ್ಪಂದದಿಂದ ನನ್ನ ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯನವರೆ ನಿಮಗೆ ಈಗ ಸೋಲಿನ ಕಹಿ ಅರ್ಥ ಆಯ್ತ. ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಮರುದಿನವೇ ಹೇಳಿದ್ದೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ ಅಂತ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಕಾಣಲ್ಲ ಅನ್ಕೊಂಡಿದ್ದೀರ? ಸಿದ್ದರಾಮಯ್ಯ ಹತಾಶನಾಗಿ ಸತ್ತ ಕೋಳಿಯಂತಾಗಿದ್ದಾನೆ. ಸತ್ತಕೋಳಿ ಬೆಂಕಿಗೆ ಹೆದರುವಂತಾಗಿದೆ ಸಿದ್ದರಾಮಯ್ಯನ ಸದ್ಯದ ಸ್ಥಿತಿ ಎಂದು ಲೇವಡಿ ಮಾಡಿದರು. 

ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ, ಮಹದೇವಪ್ಪನ ದರ್ಪ ದುರಹಂಕಾರ ಈ ಪರಿಸ್ಥಿತಿಗೆ ಕೊಂಡೊಯ್ದಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ವಿರೋಧಿಸುವವರಿದ್ದಾರೆ. ಈಗಾಗಲೇ ಉಪ ಚುನಾವಣೆಗಳಲ್ಲಿನ ಕಾಂಗ್ರೆಸ್ ಪಥನದ ಹಾದಿ ಹಿಡಿದೆದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News