ಗೋಹತ್ಯೆ ನಿಷೇಧ: ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ಇಲಾಖೆ ಸಿದ್ಧ; ಸಚಿವ ಪ್ರಭು ಚೌಹಾಣ್

Update: 2020-12-29 16:39 GMT

ಬೆಂಗಳೂರು, ಡಿ. 29: ಗೋಹತ್ಯೆ ನಿಷೇಧ ರಾಜ್ಯದಲ್ಲಿ ಕಠಿಣವಾಗಿ ಜಾರಿಗೆ ತರಲು ಇಲಾಖೆಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಪಾಲರಿಂದ ಅಂಕಿತವಾದ ತಕ್ಷಣ ಇಲಾಖೆ ತೀವ್ರಗತಿಯಲ್ಲಿ ಗೋವು ಸಂರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಲಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಜನಿಸುತ್ತಿರುವ ವಿದೇಶಿ ತಳಿಯ ಗಂಡುಕರುಗಳನ್ನು ಕಟುಕರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ಇದು ಶಿಕ್ಷಾರ್ಹ. ಪಶುಪಾಲಕರು ಗಂಡುಕರುಗಳನ್ನು ಕನಿಷ್ಠ 6 ತಿಂಗಳವರೆಗೆ ತಾಯಿಯೊಂದಿಗೆ ಸಾಕಿ ನಂತರ ಕರುವನ್ನು ಗೋಶಾಲೆಗೆ ನೀಡಬೇಕು. ಒಂದು ವೇಳೆ ರೈತರಲ್ಲಿ, ಪಶುಪಾಲಕರಲ್ಲಿ ವಯಸ್ಸಾದ ಗೋವುಗಳಿದ್ದರೆ ಅವುಗಳನ್ನು ವಧೆಗಾಗಿ ಕಟುಕರಿಗೆ ನೀಡದೆ ಹತ್ತಿರದ ಗೋಶಾಲೆಗೆ ನೀಡಬಹುದು. ನಿರುಪಯುಕ್ತವೆಂದು ರಸ್ತೆಗೆ ಬಿಡುವುದು, ವಧೆಗೆ ನೀಡುವುದನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳಲ್ಲಿ 75ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ ಸಾಮರ್ಥ್ಯ ಹೆಚ್ಚಿಸಲು ಎಲ್ಲ ಗೋಶಾಲೆಗಳಿಗೆ ತಿಳಿಸಲಾಗಿದೆ. ಗೋವು ಸಾಕಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದವರು ಗೋಶಾಲೆಗಳಿಗೆ ತಮ್ಮ ಜಾನುವಾರು ಬಿಡಲು ಮುಂದಾದರೆ ಗೋಶಾಲೆಗಳು ಗೋವುಗಳನ್ನು ಪಡೆಯಲು ನಿರಾಕರಿಸುವಂತಿಲ್ಲ.

ಹೊಸದಾಗಿ ಗೋಶಾಲೆಗಳನ್ನು ಆರಂಭಿಸುವವರಿಗೆ ಈ ಸಂದರ್ಭದಲ್ಲಿ ಇಲಾಖೆ ಹಾಗೂ ಸರಕಾರದ ಕಡೆಯಿಂದ ಪ್ರೋತ್ಸಾಹ ನೀಡುತ್ತೇವೆ. ಗೋವುಗಳ ಸಂರಕ್ಷಣೆ ಕೇವಲ ಸರಕಾರದ ಹೊಣೆ ಎಂದು ತಿಳಿಯದೇ ಸಾರ್ವಜನಿಕರು ಈ ಕಾರ್ಯದಲ್ಲಿ ಕೈಜೋಡಿಸಬಹುದು. ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಗೋಹತ್ಯೆ ನಿಷೇಧ ವಿಚಾರದಲ್ಲಿ ಸರಕಾರದ ಜೊತೆ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಎಚ್ಚರಿಕೆ: ರಾಜ್ಯದಲ್ಲಿ ಬೀಡಾಡಿ ದನಗಳ ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಂತಹ ದನಗಳನ್ನು ತಕ್ಷಣದಲ್ಲಿ ಹತ್ತಿರದ ಗೋಶಾಲೆಗಳಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಹೊಸದಾಗಿ ಗೋಶಾಲೆಗಳನ್ನು ತೆರೆದು ಮೇವು, ನೀರು, ಚಿಕಿತ್ಸೆ ಹಾಗೂ ಬೀಡಾಡಿ ದನಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ರಸ್ತೆಯಲ್ಲಿ ಬೀಡಾಡಿ ಜಾನುವಾರು ಕಂಡುಬಂದಲ್ಲಿ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹದ್ದಿನ ಕಣ್ಣು: ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರೊಂದಿಗೆ ಚರ್ಚೆ ಮಾಡಲಾಗಿದ್ದು ರಾಜ್ಯದೆಲ್ಲೆಡೆ ಅಕ್ರಮವಾಗಿ ನಡೆಯುವ ಗೋವುಗಳ ಸಾಗಾಟ, ವಧೆಯ ಬಗ್ಗೆ ನಿಗಾವಹಿಸಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎಲ್ಲೆಡೆ ಹದ್ದಿನ ಕಣ್ಣಿಡಲು ನಿರ್ದೇಶನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಗೋಹತ್ಯೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳಿಗಾಗಿ ಸಾಗಾಣಿಕೆ ಮಾಡುವವರಿಗೆ ನೀಡಬೇಕಾದ ಅನುಮತಿ ಪತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ನಾಟಕ: ಸುಗ್ರೀವಾಜ್ಞೆ ಜಾರಿಗೆ ತರುತ್ತಿದ್ದೇವೆ ಎಂದು ತಿಳಿದ ತಕ್ಷಣವೇ ಕೆಲವು ರಾಜಕೀಯ ನಾಟಕಗಳು ಆರಂಭವಾಗಿವೆ. ಹಿಂದೂ ಧರ್ಮದಲ್ಲಿ ಗೋವಿಗೆ ಶ್ರೇಷ್ಠ ಸ್ಥಾನವಿದೆ. ದೇವರ ಸಮಾನವಾಗಿ ತಾಯಿಯ ಸಮಾನವಾಗಿ ಗೋವನ್ನು ಪೂಜಿಸುತ್ತೇವೆ. ಎಲ್ಲ ಶುಭ ಸಂದರ್ಭದಲ್ಲಿ ಗೋವನ್ನು ಪೂಜಿಸುತ್ತೇವೆ. ಗೃಹ ಪ್ರವೇಶ, ಮನೆ ಶುದ್ಧಿಗೆ ಗೋವನ್ನು ಹಾಗೂ ಅದರ ಉತ್ಪನ್ನಗಳನ್ನು ಬಳಸುತ್ತೇವೆ. ಪಂಚಗವ್ಯವನ್ನು ಕೀಟನಾಶಕವಾಗಿ ಬಳಕೆ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನು ತಿಳಿದು ರಾಜಕೀಯ ಕಾರಣಕ್ಕಾಗಿ ಗೋವುಗಳನ್ನು ಕಡೆಗಣಿಸಿ ವಿರೋಧಿಸುತ್ತಿರುವುದು ವಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿದ್ದ ಕೆಲವು ದುರ್ಬಲ ಅಂಶಗಳ ಅಧ್ಯಯನ ನಡೆಸಿ ಈಗಿನ ಮಸೂದೆಯಲ್ಲಿ ಆ ಅಂಶಗಳನ್ನು ಬಲಪಡಿಸಿದ್ದೇವೆ. ಶಿಕ್ಷೆ ಮತ್ತು ದಂಡದ ಪ್ರಮಾಣ ಈ ಮಸೂದೆಯಲ್ಲಿ ಹೆಚ್ಚಿಸಲಾಗಿದೆ. ಇದರಿಂದ ಅಕ್ರಮವಾಗಿ ಗೋವುಗಳ ಸಾಗಣೆ ಮತ್ತು ವಧೆ ಮಾಡುವವರಲ್ಲಿ ನಡುಕ ಹುಟ್ಟುತ್ತದೆ. ಇದರಿಂದಾಗಿ ಗೋವುಗಳ ಅಕ್ರಮ ಸಾಗಣೆಗೆ ಕಡಿವಾಣ ಬೀಳಲಿದೆ. ನಮ್ಮ ಉದ್ದೇಶ ಶಿಕ್ಷೆ ನೀಡುವುದಲ್ಲ ತಪ್ಪು ಮಾಡದಂತೆ ಗಮನಿಸಿ ಗೋವುಗಳ ಸಂರಕ್ಷಣೆ ಮಾಡುವುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಹಾರದ ಹಕ್ಕು ಕಸಿಯುತ್ತಿಲ್ಲ

'ಮಾಂಸ ತಿನ್ನುವವರ ಹಕ್ಕನ್ನು ಈ ಕಾಯ್ದೆಯ ಮೂಲಕ ಮೊಟಕುಗೊಳಿಸುತ್ತಿಲ್ಲ. ಈ ಮಸೂದೆಯಲ್ಲೇ ತಿಳಿಸಿದಂತೆ 13 ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ-ಕೋಣಗಳನ್ನು ಕೈಬಿಡಲಾಗಿರುವುದರಿಂದ ಆಹಾರದ ಹಕ್ಕನ್ನು ಈ ಕಾಯ್ದೆ ಕಸಿಯುತ್ತಿದೆ ಎಂಬ ಹೇಳಿಕೆಗಳು ನಿರಾಧಾರ. ಈ ಹಿಂದೆ ಇದೇ ಮಸೂದೆಯನ್ನು ಮಂಡಿಸಿದಾಗ ಎಮ್ಮೆ-ಕೋಣಗಳನ್ನು ಕೈಬಿಟ್ಟರೆ ಅಂಗೀಕರಿಸಬಹುದು ಎಂದು ಕಾಂಗ್ರೆಸ್ 2010ರ ಅವಧಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ಅಂಶ ಈಗಿನ ಮಸೂದೆಯಲ್ಲಿ ಪರಿಗಣಿಸಲಾಗಿದೆ. ಆದರೂ, ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್‍ನ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ'

-ಪ್ರಭು ಚೌಹಾಣ್, ಪಶುಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News