2021ರಲ್ಲಿ ಕೊರೋನ ನಿರ್ಮೂಲನೆಗೆ ಭಾರತ ಸಂಕಲ್ಪ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Update: 2021-01-01 18:14 GMT

ಬೆಂಗಳೂರು, ಜ.1: ನಾಡಿನ ಜನತೆಗೆ ಹೊಸವರ್ಷದ ಶುಭಾಶಯ ಕೋರಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, 2021ರಲ್ಲಿ ಸಾಂಕ್ರಾಮಿಕ ಕೊರೋನ ರೋಗದ ಸಂಪೂರ್ಣ ನಿರ್ಮೂಲನೆಗೆ ನಾವೆಲ್ಲ ಸೇರಿ ದೃಢ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗತ್ತನ್ನೆ ಕಾಡಿದ ಸಾಂಕ್ರಾಮಿಕ ಕೊರೋನ ರೋಗವು 2020ರಲ್ಲಿ ಎಲ್ಲ ರಂಗಗಳ ಮೇಲೆಯೂ ದುಷ್ಪರಿಣಾಮ ಬೀರಿತು. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಈ ಸಾಂಕ್ರಾಮಿಕವು ಭಾರೀ ಪ್ರಮಾಣದಲ್ಲಿ ಸಾವು-ನೋವು ಉಂಟುಮಾಡಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶವು ಈ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸಿತು. ಸವಾಲನ್ನು ಒಂದು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನವಾಗಿ ಸ್ವಾವಲಂಬಿ ಭಾರತ (ಆತ್ಮನಿರ್ಭರ್ ಭಾರತ್) ಅಭಿಯಾನಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿಸಿದ್ದಾರೆ.

ಕೊರೋನ ಆರಂಭಕ್ಕೆ ಮುನ್ನ ಭಾರತದಲ್ಲಿ ಪಿಪಿಇ ಕಿಟ್ಟುಗಳು, ವೆಂಟಿಲೇಟರುಗಳು ತಯಾರಾಗುತ್ತಿರಲಿಲ್ಲ. ಆದರೆ ಇಂದು ಪ್ರತಿನಿತ್ಯ 4 ಲಕ್ಷ ಪಿಪಿಇ ಕಿಟ್ಟುಗಳನ್ನು ತಯಾರಿಸುತ್ತಿದ್ದೇವೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಗಳ ಉತ್ಪಾದನೆ ಆರಂಭಗೊಂಡಿದೆ. ವೈದ್ಯಕೀಯ ಉಪಕರಣಗಳ ಸ್ವಾವಲಂಬನೆಗೂ ಕ್ರಮ ಕೈಗೊಳ್ಳಲಾಗಿದೆ. ಕೊರೋನ ಸಂಕಷ್ಟದ ಕಾಲದಲ್ಲಿ ನಾವು ಜಗತ್ತಿನ 120 ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಕಳುಹಿಸಿಕೊಟ್ಟೆವು. ಭಾರತದ ಈ ನೆರವನ್ನು ಇಡೀ ವಿಶ್ವವೇ ಕೊಂಡಾಡಿತು ಎಂದು ಸದಾನಂದಗೌಡ ಹೇಳಿದ್ದಾರೆ.

ಭಾರತ ಜಗತ್ತಿನ ಪ್ರಮುಖ ಔಷಧ ರಫ್ತುದಾರ ರಾಷ್ಟ್ರ. ಆದರೆ ನಾವಿನ್ನೂ ಕೆಲವು ಮೂಲ ಔಷಧ ರಾಸಾಯನಿಕಗಳಿಗಾಗಿ ಚೀನಾ ಮುಂತಾದ ದೇಶಗಳ ಮೇಲೆಯೆ ಅವಲಂಬಿಸಿದ್ದೇವೆ. ಇವನ್ನು ಸಂಪೂರ್ಣ ಸ್ವದೇಶಿಯವಾಗಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ. ನಾನು ನಿರ್ವಹಿಸುವ ರಾಸಾಯನಿಕ ಇಲಾಖೆ (ಔಷಧೋದ್ಯಮ ಸೇರಿದಂತೆ) ಅಂದಾಜು 14300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೂರು ಕಡೆ ಬಲ್ಕ್ ಡ್ರಗ್ ಪಾರ್ಕ್ ಹಾಗೂ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

ಅದೇ ರೀತಿ ನಾನು ನಿರ್ವಹಿಸುವ ಇನ್ನೊಂದು ಇಲಾಖೆ ಅಂದರೆ ರಸಗೊಬ್ಬರ ಇಲಾಖೆಯು ಭಾರತವನ್ನು ರಸಗೊಬ್ಬರ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿ ಮಾಡಲು ನಿರ್ಧಿಷ್ಟ ಯೋಜನೆಗಳನ್ನು ರೂಪಿಸಿದೆ. 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಯುರಿಯಾ ಉತ್ಪಾದನಾ ಘಟಕಗಳನ್ನು ಪುನುರುಜ್ಜೀವನಗೊಳಿಸಲಾಗುತ್ತಿದೆ. ಇವು ವಾರ್ಷಿಕವಾಗಿ ತಲಾ 12 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ಘಟಕಗಳು. ರಾಮಗುಂಡಂ ಕಾರ್ಖಾನೆಯ ಕೆಲಸ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನದಿಂದ ನಾವು ಹೊಸಪಾಠಗಳನ್ನು ಕಲಿಯುತ್ತಿದ್ದೇವೆ. ಲಸಿಕೆ ದೊರೆಯುತ್ತಿದ್ದಂತೆ ಸರಕಾರವು ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಕೊರೋನ ವೈರಾಣು ಇನ್ನೂ ವ್ಯಾಪಕವಾಗಿಯೆ ಇದೆ. ಹಾಗಾಗಿ ನಾವೆಲ್ಲ ಅದರ ಬಗ್ಗೆ ಮುಂಜಾಗ್ರತೆಯಿಂದ ಇರಬೇಕು. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಇವೇ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು. 2021ರಲ್ಲಿ ಕೊರೋನ ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲ ಪಣತೊಡೋಣ ಎಂದು ಸದಾನಂದಗೌಡ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News