ಕೊಟ್ಟಿಗೆಗೆ ಬೆಂಕಿ: ಎರಡು ಹಸುಗಳು ಸಜೀವ ದಹನ

Update: 2021-01-02 17:16 GMT

ಚಿಕ್ಕಮಗಳೂರು, ಜ.2: ವ್ಯಕ್ತಿಯೊಬ್ಬರ ದನದ ಕೊಟ್ಟಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವ ಘಟನೆ ಶುಕ್ರವಾರ ರಾತ್ರಿ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ವರದಿಯಾಗಿದೆ.

ಅಜ್ಜಂಪುರ ತಾಲೂಕು ಜಾವೂರು ಹೊಸಳ್ಳಿ ಚಂದ್ರಪ್ಪ ಎಂಬವರ ದನದ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ 2 ಹಸುಗಳು ಸಜೀವ ದಹನವಾಗಿವೆ. 5 ಹಸುಗಳು ಸುಟ್ಟ ಗಾಯಗಳಿಂದ ನರಳಾಡುತ್ತಿವೆ. ಕೊಟ್ಟಿಗೆಗೆ ಬೆಂಕಿ ಬಿದಿರುವುದು ತಿಳಿಯುತ್ತಿದ್ದಂತೆ ಕುಟುಂಬದವರು ಮತ್ತು ಅಕ್ಕಪಕ್ಕದ ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. 

ಕೊಟ್ಟಿಗೆಯಲ್ಲಿ ಇರಿಸಿದ್ದ ತೆಂಗಿನ ಕಾಯಿ ಮೂಡೆಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಕೊಟ್ಟಿಗೆ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಭಸ್ಮವಾಗಿದ್ದು, ಕೊಟ್ಟಿಗೆಗೆ ಬೆಂಕಿ ಇಟ್ಟವರು ಯಾರೆಂದು ತಿಳಿದು ಬಂದಿಲ್ಲ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚಂದ್ರಪ್ಪ ಅವರ ಮೇಲಿನ ದ್ವೇಷಕ್ಕೆ ಹೀಗೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಘಟನೆ ಸಂಬಂದ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News