ಇನ್ನು ಎರಡು ದಿನಗಳಲ್ಲಿ ಮಂತ್ರಿ ಆಗುತ್ತೇನೆ: ಪರಿಷತ್ ಸದಸ್ಯ ಆರ್.ಶಂಕರ್

Update: 2021-01-05 12:14 GMT

ಬೆಂಗಳೂರು, ಜ. 5: ನಾನು ಇನ್ನು ಎರಡು ದಿನಗಳಲ್ಲಿ ಸಚಿವನಾಗಲಿದ್ದೇನೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಮಾಹಿತಿ ನೀಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮಂಗಳವಾರ ಇಲ್ಲಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಇನ್ನೆರಡು ದಿನದಲ್ಲಿ ಮಂತ್ರಿಯಾಗುತ್ತೇನೆ. ಅದೃಷ್ಟವಿದ್ದರೆ ಇಂದು ಸಂಜೆಯೂ ಆಗಬಹುದೆಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ನನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಗೆ ನಿಗದಿಯಾಗಿದೆ ಎಂದು ಪರೋಕ್ಷ ಸೂಚನೆ ನೀಡಿದರು.

ನನ್ನ ಜೊತೆ ಆಗಮಿಸಿದ್ದ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ, ಇದೇ ಮಾತನ್ನು ಹೇಳಿದ್ದಾರೆ. ಉಮೇಶ್ ಕತ್ತಿ ಮತ್ತು ನೀವು ಇಬ್ಬರು ಜೊತೆಯಲ್ಲೇ ಸಚಿವರಾಗಲಿದ್ದೀರಿ ಎಂದು ಯಡಿಯೂರಪ್ಪ ಭರವಸೆ ನೀಡಿದ್ದು, ನನಗೆ ಈ ಬಾರಿ ಮಂತ್ರಿ ಸ್ಥಾನ ದೊರೆಯುವುದು ನೂರಕ್ಕೆ ನೂರು ಖಚಿತ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಅರ್ಥವಿಲ್ಲ. ಎಂದಿನಂತೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ನಮಗೆ ಈಗಲೂ ಯಡಿಯೂರಪ್ಪನವರ ಬಗ್ಗೆ ಅಪಾರ ನಂಬಿಕೆಯಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ನಾಯಕ ಯಡಿಯೂರಪ್ಪ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News