224 ಶಾಸಕರೂ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ: ನೂತನ ಸಚಿವ ಉಮೇಶ್ ಕತ್ತಿ
ಬೆಂಗಳೂರು, ಜ. 14: ನಾನು ಮಂತ್ರಿ ಆಗಲು ಒಂದು ವರ್ಷ ಕಾಯ್ದಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಶಾಸಕರೂ ಸಚಿವರಾಗಲಿದ್ದಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ವರ್ಷ ಕಾದ ನಂತರ ಸಚಿವನಾಗಿದ್ದೇನೆ. 224 ಶಾಸಕರೂ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿಚಾರ ನ್ಯಾಯಾಲಯದಲ್ಲಿದ್ದು, ಅದು ಇತ್ಯರ್ಥವಾದ ನಂತರ ಅವರೂ ಸಚಿವರಾಗಲಿದ್ದಾರೆ ಎಂದು ಉಮೇಶ್ ಕತ್ತಿ ತಿಳಿಸಿದರು.
ಬ್ಲ್ಯಾಕ್ಮೇಲ್ ಮಾಡಿ ಕೆಲವರು ಸಚಿವರಾಗಿದ್ದಾರೆಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಮಕರ ಸಂಕ್ರಮಣ ದಿನದಂದು ಒಳ್ಳೆಯ ಯೋಚನೆ ಮಾಡಿ, ಒಳ್ಳೆಯ ಕೆಲಸ ಮಾಡಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಉಮೇಶ್ ಕತ್ತಿ ಹೇಳಿದರು.