ಅಡಿಕೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅಪಘಾತ: ಇಬ್ಬರು ಕಾರ್ಮಿಕರು ಮೃತ್ಯು

Update: 2021-01-14 12:55 GMT

ಕಳಸ, ಜ.14: ಬುಧವಾರ ತಡರಾತ್ರಿ ಕಳಸ ಹೋಬಳಿ ವ್ಯಾಪ್ತಿಯಲಿರುವ ಕಗ್ಗನಳ್ಳ ಸಮೀಪದ ಹೆರಟೆ ಎಂಬಲ್ಲಿ ಅಡಿಕೆ ತುಂಬಿದ್ದ ಟ್ರ್ಯಾಕ್ಟರ್ ನ ಟ್ರೆಲರ್ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.

ಮೃತರಾದವರನ್ನು ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದ ನಾಗೇಶ್(35), ನರೇಶ್(32)ಎಂದು ಗುರುತಿಸಲಾಗಿದೆ. ಮೃತರು ಕಳಸ ಸಮೀಪದ ಹೊರನಾಡು ಗ್ರಾಮದಲ್ಲಿ ಅಡಿಕೆ ಗೊನೆ ತೆಗೆದು ಹಸಿ ಅಡಿಕೆಯನ್ನು ಮೂಟೆ ಮಾಡಿ ಟ್ರಾಕ್ಟರ್ ನಲ್ಲಿ ತುಂಬಿಸಿಕೊಂಡು ಎನ್.ಆರ್.ಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಬುಧವಾರ ರಾತ್ರಿ ಸುಮಾರು 11ರ ಸಮಯದಲ್ಲಿ ಹೊರನಾಡು-ಬಾಳೆಹೊನ್ನೂರು ರಸ್ತೆಯಲ್ಲಿರುವ ಕಗ್ಗನಳ್ಳ ಸಮೀಪದ ಹೆರಟೆ ಎಂಬಲ್ಲಿರುವ ತಿರುವಿನಲ್ಲಿ ಟ್ರ್ಯಾಕ್ಟರ್ ನ ಟ್ರೇಲರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ನ ಟ್ರೇಲರ್ ನಲ್ಲಿದ್ದ ಅಡಿಕೆ ಮೂಟೆಗಳ ಮೇಲೆ ಕುಳಿತಿದ್ದ ನಾಗೇಶ್ ಹಾಗೂ ನರೇಶ್ ಅಡಿಕೆ ಮೂಟೆಗಳ ಅಡಿ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ನರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ನಾಗೇಶ್ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಇಬ್ಬರ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಕಳಸ ಸರಕಾರ ಆಸ್ಪತ್ರೆಯಲ್ಲಿ ನಡೆಸಿದ್ದು, ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲಾಗಿದೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News