ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ ಸಿಎಂ ಯಡಿಯೂರಪ್ಪ

Update: 2021-01-18 18:33 GMT

ಬೆಂಗಳೂರು, ಜ.18: ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಅಕ್ರಮವಾಗಿ ಹಿಂಪಡೆದ ಆರೋಪ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಉದ್ಯಮಿ ಆಲಂ ಪಾಷಾ ಒಡೆತನಕ್ಕೆ ಸೇರಿದ ಕಂಪೆನಿಗೆ ದೇವನಹಳ್ಳಿ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಸರಕಾರದಿಂದ ಮಂಜೂರು ಮಾಡಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ನಿರಾಣಿ ವಿರುದ್ಧ ಆಲಂ ಪಾಷಾ ಖಾಸಗಿ ದೂರು ದಾಖಲಿಸಿದ್ದರು. ಬಿಎಸ್‌ವೈ ವಿರುದ್ಧದ ಖಾಸಗಿ ದೂರು ಮುಂದುವರಿಸಲು 2021ರ ಜ.5ರಂದು ಹೈಕೋರ್ಟ್ ಆದೇಶಿಸಿತ್ತು. ಹೀಗಾಗಿ, ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಏನಿದು ಪ್ರಕರಣ: ದೇವನಹಳ್ಳಿಯ ಇಂಡಸ್ಟ್ರಿಯಲ್ ಹಾರ್ಡ್ವೇರ್ ಪಾರ್ಕ್ ನಲ್ಲಿ 26 ಎಕರೆ ಜಮೀನನ್ನು ತಮ್ಮ ಕಂಪೆನಿಗೆ ಸರಕಾರ 2010-11ರಲ್ಲಿ ಮಂಜೂರು ಮಾಡಿತ್ತು. ನಂತರ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಹಿಂಪಡೆದಿದ್ದಾರೆ. ಹಿಂಪಡೆದ ಜಮೀನನ್ನು ಬೇರೆ ಕಂಪೆನಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಲಂ ಪಾಷಾ 2016ರಲ್ಲಿ ಲೋಕಾಯುಕ್ತ ಕೋರ್ಟ್ ಗೆ ಖಾಸಗಿ ದೂರು ದಾಖಲಿಸಿದ್ದರು.

ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ ಎಂದು ತಿಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಪಾಷಾ ದೂರನ್ನು ವಜಾಗೊಳಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಪಾಷಾ 2016ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ಪೂರ್ವಾನುಮತಿ ಪಡೆಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾ. ಮೈಕಲ್ ಕುನ್ಹಾ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆಗೆ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News