ಗೋಹತ್ಯೆ ನಿಷೇಧ ಕಾಯ್ದೆಗೆ ನಿಯಮ ರೂಪಿಸುವವರೆಗೆ ಕಠಿಣ ಕ್ರಮವಿಲ್ಲ: ಹೈಕೋರ್ಟ್ ಗೆ ಸರಕಾರದ ಸ್ಪಷ್ಟನೆ

Update: 2021-01-20 15:58 GMT

ಬೆಂಗಳೂರು, ಜ.18: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ವಿಧೇಯಕ-2020ರ ಸುಗ್ರೀವಾಜ್ಞೆಗೆ ನಿಯಮಗಳನ್ನು ರೂಪಿಸುವವರೆಗೆ ಸೆಕ್ಷನ್ 5ರ ಅಡಿಯಲ್ಲಿ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ.

ನಗರದ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಸುಗ್ರೀವಾಜ್ಞೆಯನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಈ ವೇಳೆ ಸರಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದಕ್ಕೆ ನಿರ್ಬಂಧಗಳಿವೆ. ಇದು ರೈತರು ತಮ್ಮ ಜಾನುವಾರುಗಳನ್ನು ಕೃಷಿ ಕೆಲಸಗಳಿಗೆ, ಹೈನುಗಾರಿಕೆಗೆ ಸಾಗಿಸುವುದಕ್ಕೂ ಅಡ್ಡಿಯಾಗಿದೆ ಎಂದಿತು. ಇದಕ್ಕೆ ಉತ್ತರಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಕಾಯ್ದೆಗೆ ನಿಯಮಗಳನ್ನು ರೂಪಿಸುವವರೆಗೆ ಸೆಕ್ಷನ್ 5ರ ಅಡಿಯಲ್ಲಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಹಾಗಿದ್ದರೆ ಈ ಹಂತದಲ್ಲಿ ಸುಗ್ರೀವಾಜ್ಞೆಗೆ ತಡೆ ಕೋರಿರುವ ಮಧ್ಯಂತರ ಮನವಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಹಾಗೆಯೇ, ಅರ್ಜಿಗೆ ಆಕ್ಷೇಪಣೆಯನ್ನು ಫೆ.20ರೊಳಗೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು, ಸುಗ್ರೀವಾಜ್ಞೆಯಲ್ಲಿರುವ ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಸಾಗಿಸುವುದು ಕಷ್ಟದ ಕೆಲಸ. ಪ್ರತಿ ಬಾರಿ ರೈತರು ಜಿಲ್ಲಾ ಪಶುವೈದ್ಯಾಧಿಕಾರಿ ಬಳಿ ಹೋಗಿ ನಿಯಮಗಳನ್ನು ಪಾಲಿಸಲು ಅನುಮತಿ ಕೇಳುವುದು ಸರಿ ಕಾಣುವುದಿಲ್ಲ. ಹೀಗಾಗಿ ನಿಯಮಗಳಿಗೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

ಅರ್ಜಿದಾರರ ಮನವಿ ಏನು: ರಾಜ್ಯದಲ್ಲಿ ಎಲ್ಲ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ 13 ವರ್ಷದೊಳಗಿನ ಕೋಣ ಅಥವಾ ಎಮ್ಮೆಗಳ ಹತ್ಯೆಯನ್ನು ನಿಷೇಧಿಸಲು ಸರಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ರೂಪಿಸಿದೆ. ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಆದರೆ, ವಿಧಾನ ಪರಿಷತ್ತಿನಲ್ಲಿ ಅನುಮೋದನೆ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ನಿಯಮ ಜಾರಿ ಮಾಡಲು ರಾಜ್ಯಪಾಲರ ಒಪ್ಪಿಗೆ ಕೋರಿತ್ತು.

ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಸರಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, 1964ರಿಂದ ಕರ್ನಾಟಕದಲ್ಲಿ ಜಾನುವಾರು ಸಂರಕ್ಷಣೆ ಮತ್ತು ಗೋಹತ್ಯೆ ತಡೆ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ, ಜಾರುವಾರು ರಕ್ಷಣೆ ಹೆಸರಿನಲ್ಲಿ ಸುಗ್ರೀವಾಜ್ಞೆ ಅಗತ್ಯವೇನಿಲ್ಲ. ಬಿಹಾರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, 15 ವರ್ಷ ಮೀರಿದ ಹಸು ಮತ್ತು ಎತ್ತುಗಳನ್ನು ವ್ಯವಸಾಯ, ಹೈನುಗಾರಿಕೆ ಉಪಯೋಗಕ್ಕೆ ಬರುವುದಿಲ್ಲ. ಅಂತಹ ಹಸು ಹಾಗೂ ಎತ್ತುಗಳನ್ನು ಕಸಾಯಿ ಖಾನೆಗೆ ರೈತರು ಮಾರಾಟ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News