ಛಪ್ಪನ್ನೈವತ್ತಾರು ದೇಶ/ ಭಾರತ ಭಾಗ್ಯ ವಿಧಾತಾ

Update: 2021-01-23 07:36 GMT

ಚಾರಿತ್ರಿಕವಾಗಿ ನೋಡಿದರೆ ಇನ್ನು ಶಿಶುವಿನಂತಿರುವ ಈ ರಾಷ್ಟ್ರೀಯವಾದವನ್ನು, ಕಾಲಾಂತರದಿಂದ ಬದಲಾಗುತ್ತಲೇ ಬಂದ, ಬರುತ್ತಿರುವ ವಿದ್ಯಮಾನಗಳಿಗೆ, ಚರಿತ್ರೆಗೆ ಒಗ್ಗಿಸಲು-ಇದು ಶಾಶ್ವತ ಸಾರ್ವತ್ರಿಕ ಸತ್ಯ ಎಂಬಂತೆ ಬಿಂಬಿಸಲು ಹೊರಟ ಈ ವಾದದಿಂದಾಗಿ, ವಾದಕ್ಕೂ ವಸ್ತು ಸ್ಥಿತಿಗೂ ಸಂಬಂಧವೇ ಇಲ್ಲದಂತಾಗಿದೆ. ಹಾಗಲ್ಲದೇ ಮತ್ತಿನ್ನೇನಾಗಲು ಸಾಧ್ಯ ಎಂಬುದು ಹಾಬ್ಸ್‌ಬಾಮ್‌ನ ಪ್ರಶ್ನೆ. ಭಾಷೆಗಳನ್ನಾಗಲೀ ಸಮುದಾಯಗಳನ್ನಾಗಲೀ, ಅವುಗಳ ಬದಲಾಗುತ್ತಲೇ ಇರುವ ಚಹರೆಗಳನ್ನಾಗಲೀ ತೋರಿಸಿ ‘‘ಇದು ರಾಷ್ಟ್ರ’’ ಎಂದರೆ, ಪ್ರಯಾಣಿಕನೊಬ್ಬನಿಗೆ ಮೋಡಗಳ ಆಕಾರಗಳನ್ನು ದಾರಿಗುರುತುಗಳನ್ನಾಗಿ ತೋರಿಸಿದಷ್ಟೇ ನಿಷ್ಪ್ರಯೋಜಕ ಎಂದು ಹಾಬ್ಸ್‌ಬಾಮ್ ಹೇಳುತ್ತಾನೆ.

ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೇ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು. ಮಂಗಳೂರು ವಿ.ವಿ. ಕಾಲೇಜ್‌ನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರು, ಗಾಂಧಿ ಚಿಂತನೆಗಳ ಕುರಿತಂತೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಅವರ ಬಹುತೇಕ ಬರಹಗಳು ಗಾಂಧಿಯ ಅಹಿಂಸೆಯಿಂದ, ಪ್ರೀತಿಯಿಂದ ಚಿಗುರೊಡೆದಿರುವುದು. ಕನ್ನಡ, ಇಂಗ್ಲಿಷ್ ಸಾಹಿತ್ಯಗಳ ವಿವಿಧ ಪ್ರಕಾರಗಳಲ್ಲಿ ಸೋಮಯಾಜಿಯವರು ಕೈಯಾಡಿಸಿದ್ದಾರೆ.

-1-

ರಾಷ್ಟ್ರ: ಹೆಸರಲ್ಲೇನಿದೇ?

ಭಾರತದ ರಾಷ್ಟ್ರಗೀತೆಯ ಕರ್ತೃ ಕವಿ ಗುರುದೇವ ರವಿಂದ್ರನಾಥ ಠಾಗೂರರು, ಬಾಂಗ್ಲಾದೇಶದ ರಾಷ್ಟ್ರಗೀತೆಯ ಕರ್ತೃ ಕೂಡ. ಶ್ರೀಲಂಕಾದ ರಾಷ್ಟ್ರಗೀತೆಯನ್ನು ಕೂಡಾ ಬರೆದವರು ಅವರೇ ಎಂಬ ವಾದವಿದೆ; ಶಾಂತಿನಿಕೇತನದಲ್ಲಿ ವಿದ್ಯಾರ್ಥಿಯಾಗಿದ್ದ ಶ್ರೀಲಂಕಾದ ಕವಿ ಆನಂದ ಸಮರಕೂನ, ಠಾಗೂರರಿಂದ ಪ್ರಭಾವಿತನಾಗಿ ಬರೆದದ್ದು ಎಂಬ ವಾದವೂ ಇದೆ; ಠಾಗೂರರು ಹಾಕಿಕೊಟ್ಟ ಸಂಗೀತಕ್ಕೆ ಆತ ಸಾಲುಗಳನ್ನು ಬರೆದ ಎಂಬ ವಾದವೂ ಇದೆ (1961ರಲ್ಲಿ ಶ್ರೀಲಂಕಾದ ರಾಷ್ಟ್ರಗೀತೆಯ ಮೊದಲ ಸಾಲನ್ನು ತಿದ್ದಿದ ಸರಕಾರದ ನಡೆಯನ್ನು ವಿರೋಧಿಸಿ ಆತ 1962ರಲ್ಲಿ ರಾಷ್ಟ್ರಗೀತೆಯ ಅಂಗಾಂಗಗಳನ್ನು ಬೇಕಾಬಿಟ್ಟಿ ಕತ್ತರಿಸಲಾಗಿದೆ ಎಂದು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ). ಭಾರತದ ರಾಷ್ಟ್ರೀಯ ಹಾಡು (National Song) ಎಂದು ಕರೆಯಲ್ಪಡುವ ‘‘ವಂದೇ ಮಾತರಮ್’’ ಹಾಡಿಗೆ ಮೊದಲು ಸಂಗೀತ ಅಳವಡಿಸಿದವರು ಕೂಡ ರವೀಂದ್ರನಾಥ ಠಾಗೂರರೇ. ರಾಷ್ಟ್ರೀಯವಾದ ಎಂಬ ಪರಿಕಲ್ಪನೆಯನ್ನು ಅಕಾಡಮಿಕ್ ಅಧ್ಯಯನದ ಶಿಸ್ತಿಗೆ ಒಳಪಡಿಸಿ ವ್ಯಾಪಕವಾದ, ಸಂಶೋಧನಾತ್ಮಕವಾದ ಹಾಗೂ ಅರ್ಥಪೂರ್ಣವಾದ ಚರ್ಚೆಗೆ ಒಳಪಡಿಸಿದವರಲ್ಲಿ ಬೆನೆಡಿಕ್ಟ್ ಆ್ಯಂಡರ್‌ಸನ್ (Imagined Communities)(Nations and Nationalism since 1780), (Culture And Imperialism)  (The Nation and its Fragments), (the Illegitimacy Of Nationalism: Ravindranath Tagore and the Politics Of self) , ಎರಿಕ್ ಹಾಬ್ಸ್‌ಬಾಮ್ ಎಡ್ವರ್ಡ್ ಸೈದ್ ಪ್ರಮುಖರು. ನಮ್ಮವರೇ ಆದ ಪಾರ್ಥ ಚಟರ್ಜಿ ಆಶಿಶ್ ನಂದಿ ಕೂಡಾ ಅಷ್ಟೇ ಪ್ರಮುಖರು. ಇದು ಅಕಾಡಮಿಕ್ ಅಧ್ಯಯನದ ಇತ್ತೀಚಿನ ಮಾತಾದರೆ, ರಾಷ್ಟ್ರೀಯವಾದ ಎಂಬುದು ಜೀವನ್ಮರಣದ ಬಿರುಸಿನ ಚರ್ಚೆಯ ಕಾಲ ಬಹಳ ಹಿಂದಿನಿಂದ-ಅಂದರೆ ವಸಾಹತುಗಳು ವಸಾಹತುಶಾಹಿಯ ವಿರುದ್ಧ ನಡೆಸುತ್ತ ಬಂದ ಹೋರಾಟಗಳ ಕಾಲದಷ್ಟು ಚಾಲ್ತಿಯಲ್ಲಿತ್ತು. ಆದರೆ ಹಿಂದೆ ಎಂದರೆ ಎಷ್ಟು ಹಿಂದೆ?

ವಾಲ್ಟರ್ ಬಾಗೆಹಾಟ್ ಹತ್ತೊಂಭತ್ತನೆಯ ಶತಮಾನವನ್ನು ‘‘ರಾಷ್ಟ್ರ ನಿರ್ಮಾಣದ ಕಾಲ’’ ಎಂದು ಹೆಸರಿಸಿ ಹೇಳುವ ಮಾತಿದು: ‘‘ನೀವು ಪ್ರಶ್ನೆ ಕೇಳದಿದ್ದರೆ ರಾಷ್ಟ್ರ ಎಂದರೆ ಏನು ನಮಗೆ ಗೊತ್ತು, ಆದರೆ ನಾವದನ್ನು ಸುಲಭದಲ್ಲಿ ವಿವರಿಸುವುದಾಗಲೀ, ವ್ಯಾಖ್ಯಾನಿಸುವುದಾಗಲೀ ಸಾಧ್ಯವಿಲ್ಲ.’’ ಮೊದಲನೆಯ ಮಹಾಯುದ್ಧದ ನಂತರ ಇಪ್ಪತ್ತನೆಯ ಶತಮಾನದಾದ್ಯಂತ ಹಾಗೂ ಇಂದಿಗೂ, ಯುರೋಪಿನಿಂದ ಆರಂಭವಾಗಿ ಆ ನಂತರ ಜಗತ್ತಿನ ಎಲ್ಲೆಡೆಯೂ ಗಡಿ ಗುರುತುಗಳನ್ನು ಹಾಕುತ್ತ ಬದಲಿಸುತ್ತ ಬಂದ ಹಾಗೆ, ‘‘ರಾಷ್ಟ್ರ’’ ಎಂಬ ಹೊಸದೊಂದು ಕೃತ್ರಿಮ ರಾಜಕೀಯ ಪರಿಕಲ್ಪನೆಗೆ ಬಲ ಮತ್ತು ರೆಕ್ಕೆ ಪುಕ್ಕ ಬರಲಾರಂಭಿಸಿತು. ವಾಲ್ಟರ್ ಬಾಗೆಹಾಟ್ ಪ್ರಸಿದ್ಧವಾಗಿ ಹೇಳಿದಂತೆ, ‘‘ರಾಷ್ಟ್ರ ಎಂಬುದು ಚರಿತ್ರೆಯಷ್ಟು ಹಳೆಯದಲ್ಲ.’’ ಹದಿನೆಂಟನೇ ಶತಮಾನಕ್ಕಿಂತ ಮೊದಲು ಈ ಪರಿಕಲ್ಪನೆಯೇ ಇರಲಿಲ್ಲ; ಆಕ್ರಮಣಶೀಲ, ಸಾಮ್ರಾಜ್ಯಶಾಹಿ ಅಧಿಕಾರ ಪಿಪಾಸೆಯ ಮೂಸೆಯಲ್ಲಿ ಇದು ಯುರೋಪಿನಲ್ಲಿ ಮೊದಲು ತಯಾರಾಯಿತು.

ಈ ಜಗತ್ತು ಕಂಡ ನಮ್ಮ ಕಾಲದ ಅತ್ಯಂತ ಪ್ರತಿಭಾವಂತ ಚರಿತ್ರಶಾಸ್ತ್ರಜ್ಞ ಎರಿಕ್ ಹಾಬ್ಸ್‌ಬಾಮ್ (Nations and Nationalism since 1780) ಹೇಳುವಂತೆ; ‘‘ಸಮಸ್ಯೆಯೆಂದರೆ ಈ ರಾಷ್ಟ್ರ ವೀಕ್ಷಣೆಯಲ್ಲಿ ತೊಡಗಿರುವವರಿಗೆ, ಈ ರಾಷ್ಟ್ರಗಳನ್ನು, ಅವುಗಳಿಗೆ ಆ ಮೊದಲು ಇದ್ದ ಚಹರೆಗಳಿಂದ ಪ್ರತ್ಯೇಕಿಸಿ ನೋಡುವುದು ಹೇಗೆ ಎಂದು- ಉದಾಹರಣೆಗೆ, ಒಂದು ಹಕ್ಕಿಯನ್ನು ಹಕ್ಕಿ ಎಂತಲೂ, ಇಲಿಯನ್ನು ಇಲಿ ಎಂತಲೂ, ಹಲ್ಲಿಯನ್ನು ಹಲ್ಲಿ ಎಂತಲೂ ಹೇಳಬಹುದಾದಂತೆ-- ಹೇಳಲಾಗದಿರುವುದು. ರಾಷ್ಟ್ರವೀಕ್ಷಣೆ ಎಂಬುದು ಪಕ್ಷಿ ವೀಕ್ಷಣೆಯ ಹಾಗೆಯೇ ಎಂಬಂತಿದ್ದರೆ ಎಷ್ಟು ಸುಲಭವಿರುತ್ತಿತ್ತು.’’


‘‘ಭಾಷೆ, ಸಮಾನ ಚರಿತ್ರೆ, ಒಂದೇ ಭೂಪ್ರದೇಶ, ಒಂದೇ ಸಾಂಸ್ಕೃತಿಕ ಚಹರೆ ಎಂಬಿತ್ಯಾದಿ ‘‘ವಸ್ತುನಿಷ್ಠ’’ ಆಧಾರಗಳ ಮುಖಾಂತರ ರಾಷ್ಟ್ರಗಳನ್ನು ವಿವರಿಸುವ ಪ್ರಯತ್ನಗಳು ನಡೆಯುತ್ತ ಬಂದಿವೆ; ಈ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಅದರ ಕರ್ಕಶ ಹೆಚ್ಚಾಗಿದೆ’’ ಎಂದೂ ಹಾಬ್ಸ್‌ಬೋಮ್ ಹೇಳುತ್ತಾನೆ. ಚಾರಿತ್ರಿಕವಾಗಿ ನೋಡಿದರೆ ಇನ್ನು ಶಿಶುವಿನಂತಿರುವ ಈ ರಾಷ್ಟ್ರೀಯವಾದವನ್ನು, ಕಾಲಾಂತರದಿಂದ ಬದಲಾಗುತ್ತಲೇ ಬಂದ, ಬರುತ್ತಿರುವ ವಿದ್ಯಮಾನಗಳಿಗೆ, ಚರಿತ್ರೆಗೆ ಒಗ್ಗಿಸಲು-ಇದು ಶಾಶ್ವತ ಸಾರ್ವತ್ರಿಕ ಸತ್ಯ ಎಂಬಂತೆ ಬಿಂಬಿಸಲು ಹೊರಟ ಈ ವಾದದಿಂದಾಗಿ, ವಾದಕ್ಕೂ ವಸ್ತು ಸ್ಥಿತಿಗೂ ಸಂಬಂಧವೇ ಇಲ್ಲದಂತಾಗಿದೆ. ಹಾಗಲ್ಲದೇ ಮತ್ತಿನ್ನೇನಾಗಲು ಸಾಧ್ಯ ಎಂಬುದು ಹಾಬ್ಸ್‌ಬಾಮನ ಪ್ರಶ್ನೆ. ಭಾಷೆಗಳನ್ನಾಗಲೀ ಸಮುದಾಯಗಳನ್ನಾಗಲೀ, ಅವುಗಳ ಬದಲಾಗುತ್ತಲೇ ಇರುವ ಚಹರೆಗಳನ್ನಾಗಲೀ ತೋರಿಸಿ ‘‘ಇದು ರಾಷ್ಟ್ರ’’ ಎಂದರೆ, ಪ್ರಯಾಣಿಕನೊಬ್ಬನಿಗೆ ಮೋಡಗಳ ಆಕಾರಗಳನ್ನು ದಾರಿಗುರುತುಗಳನ್ನಾಗಿ ತೋರಿಸಿದಷ್ಟೇ ನಿಷ್ಪ್ರಯೋಜಕ ಎಂದು ಹಾಬ್ಸ್‌ಬಾಮ್ ಹೇಳುತ್ತಾನೆ. ಉದಾಹರಣೆಗೆ: ತಮಿಳರು, ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು ಇತ್ಯಾದಿ ಹೆಸರು ಭಾಷಿಕವಾಗಿ ಏಕತ್ರವೇ ಹೊರತು ವಸ್ತುಸ್ಥಿತಿಯಲ್ಲಲ್ಲ. ವಸ್ತುಸ್ಥಿತಿಯ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ರಾಜಕೀಯ ಅಸ್ತ್ರವಾಗಿ ರಾಷ್ಟ್ರ ಎಂಬುದು ತಲೆಯೆತ್ತಿದೆ ಎಂದೂ ಹಾಬ್ಸ್‌ಬಾಮ್ ಹೇಳುತ್ತಾನೆ.

ವಾಸ್ತವವಾಗಿ ‘‘ರಾಷ್ಟ್ರ ಎಂಬುದು (ರಾಷ್ಟ್ರೀಯವಾದದ ಪರಿಭಾಷೆಯಲ್ಲಿ) ಈಗಾಗಲೇ ಇರುವ ವಸ್ತುವೊಂದಕ್ಕೆ ಕೊಟ್ಟ ಹೆಸರಲ್ಲ; ಬದಲಾಗಿ, ಹೊರಗಿನಿಂದ ಹೇರಲಾದ, ಆ ಮೇಲೆ ತಮ್ಮ ಅನುಕೂಲಕ್ಕಾಗಿ ಅಧಿಕಾರದಲ್ಲಿರುವವರು ಮಾಡಿದ ನಾಮಕರಣ ಎಂಬುದು ಹಾಬ್‌ಬೋಮನ ವಾದ. ರೆನನ್ ಎಂಬ ವಿದ್ವಾಂಸನ ಸಾಲುಗಳನ್ನು ಉದ್ಧರಿಸಿ ಆತ ಹೇಳುವ ಈ ಮಾತು ಅರ್ಥಪೂರ್ಣವಾಗಿದೆ: ‘‘ಚರಿತ್ರೆಯನ್ನು ತಪ್ಪಾಗಿ ಗ್ರಹಿಸುವುದೇ ರಾಷ್ಟ್ರವಾಗುವ ಪ್ರಕ್ರಿಯೆ ಅದಕ್ಕಾಗಿಯೇ ಚರಿತ್ರಕಾರರನ್ನು ಅನುಕೂಲಕರ ಚರಿತ್ರೆ ಬರೆಯುವಂತೆ, ಕೊನೆಯ ಪಕ್ಷ ಅದಕ್ಕಾಗಿ ಪ್ರಯತ್ನ ಮಾಡುವಂತೆ ಒತ್ತಾಯಿಸಲಾಗುತ್ತದೆ. ಕೆ.ಎನ್. ಫಣಿಕ್ಕರ್ ಹೇಳುವಂತೆ, ಹೀಗಾಗಿಯೇ ಇವತ್ತು ಚರಿತ್ರೆ ಎಂಬ ಶಾಸ್ತ್ರವೇ ಅಳಿವಿನ ಅಂಚಿಗೆ ಬಂದು ನಿಂತಿದೆ. ಚರಿತ್ರೆಯ ಚಾರಿತ್ರ ನಾಶಕ್ಕೂ (ರಾಷ್ಟ್ರನಿರ್ಮಾಣಕ್ಕೂ ಇಂಥದೊಂದು ವಿಷಗಂಟಿದೆ). ‘‘ರಾಷ್ಟ್ರ’’ ಎಂಬ ಪರಿಕಲ್ಪನೆಯೇ ಒಂದು ‘‘ಶುದ್ಧೀಕರಣ’’ ಪ್ರಕ್ರಿಯೆಯಾಗಿದೆ. ಹಿಂಸೆ ಮತ್ತು ದ್ವೇಷವನ್ನು ಹೊಸ ಭಾಷೆಯಾಗಿ ಅದು ರೂಢಿಸುತ್ತಿದೆ. ದೇಶಭಕ್ತಿ ದ್ವೇಷಭಕ್ತಿಯೇ ಹೊರತು ಬೇರೇನಲ್ಲ.

-2-

ಹಿಂದೂ ರಾಷ್ಟ್ರ: ಬಸಿರಲ್ಲೇನಿದೆ?

ಎಂ. ಎಸ್. ಗೋಳ್ವಲ್ಕರ್ 1938ರಲ್ಲಿ ಬರೆದ We, or Our Nationhood Defined ಎಂಬ ಪುಸ್ತಕದ ಕೆಲವು ಮಾತುಗಳು ಇಂತಿವೆ (1923ರಲ್ಲಿ ವಿ.ಡಿ. ಸಾವರ್ಕರ್ ಬರೆದ (Hindutva: Who is a Hindu) ಎಂಬ ಪುಸ್ತಕದ ಮಾತುಗಳು ಪುನರುಚ್ಛ್ಛಾರಣೆ ಹಾಗೂ ವಿಸ್ತೃತ ವ್ಯಾಖ್ಯಾನವಾಗಿರುವ ಕೃತಿಯಿದು) ಗೋಳ್ವ್ವಲ್ಕರ್‌ನ Bunch Of Thoughts (1966) ಪುಸ್ತಕದಲ್ಲೂ ಇದರ ಮುಂದುವರಿಕೆಯಿದೆ. ಸಂಘಪರಿವಾರ ಎಂಬ ಭೂತದ ಬಾಯಿಯ ಭಗವದ್ಗೀತೆಗೆ ಇವು ತಾಯಿಬೇರುಗಳು. ಈ ವಿಷಬೀಜ ಬೆಳೆದು ಹೆಮ್ಮರವಾಗಿ ಟಿಸಿಲೊಡೆದು, ಕೊಂಬೆರೆಂಬೆಗಳಾಗಿ, ವಿಷಫಲ ಕೊಟ್ಟು, ಅದಕ್ಕೀಗ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ದೇಶದಾದ್ಯಂತ, ನಳನಳಿಸುತ್ತ, ಸಿಕ್ಕಸಿಕ್ಕವರನ್ನು ಥಳಿಸುತ್ತ ಇವೆ. ಈ ಭೂತದ ಬಾಯಿಂದಲೇ ಕೇಳಿ ವರ್ತಮಾನದ ಮಾನವಿಲ್ಲದ ಈ ಭಗವದ್ಗೀತೆ:

‘‘ಮುಸಲ್ಮಾನರು ಹಿಂದೂಸ್ಥಾನದಲ್ಲಿ ಕಾಲಿಟ್ಟ ಆ ವಿಷ ಘಳಿಗೆಯಿಂದೀಚೆಗೆ, ಈವರೆಗೂ ಹಿಂದೂಸ್ಥಾನವು ಪರಾಕ್ರಮಶಾಲಿಯಾಗಿ ಹೋರಾಡಿ ಈ ಲೂಟಿಕೋರ ಕ್ರೂರಿಗಳಿಂದ ಬಂಧ ಮುಕ್ತಿಗಾಗಿ ಶ್ರಮಿಸುತ್ತಲೇ ಬಂದಿದೆ. ಜನಾಂಗ ಪ್ರಜ್ಞೆ ಈಗ ಜಾಗೃತಗೊಳ್ಳುತ್ತಿದೆ.

ರಾಷ್ಟ್ರ ಎಂಬ-ಅಂದರೆ ಹಿಂದೂಜನಾಂಗ, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಭಾಷೆಗಳಿಗೆ ಸೇರದ ಎಲ್ಲ ಜನರೂ ಸ್ವಾಭಾವಿಕವಾಗಿಯೇ ರಾಷ್ಟ್ರ ಜೀವನ ಎಂಬ ಕಕ್ಷೆಯ ಹೊರಗಿನವರು. ನಾನು ತಿರುಗಿ ಹೇಳುತ್ತಾ ಇದ್ದೇನೆ: ನಮ್ಮ ಹಿಂದೂಸ್ಥಾನದಲ್ಲಿ, ಇಲ್ಲಿ ಇರಬೇಕಾದ್ದು ಹಿಂದೂ ರಾಷ್ಟ್ರ ಅಷ್ಟೇ. ರಾಷ್ಟ್ರ ಎಂದರೆ ಏನು ಎಂಬ ಈ ಆಧುನಿಕ ಕಾಲದ ವ್ಯಾಖ್ಯೆಗೆ ಅನುಗುಣವಾಗಿ, ಈ ಐದೂ-ಜನಾಂಗ, ಸಂಸ್ಕೃತಿ, ಭಾಷೆ, ಧರ್ಮ, ಪಿತೃಭೂಮಿ-ಅಂಶಗಳಿದ್ದರೆ ಮಾತ್ರ ಅದು ರಾಷ್ಟ್ರ. ಪರಿಣಾಮವಾಗಿ, ಇವತ್ತು ಹಿಂದೂ ರಾಷ್ಟ್ರ ಎಂಬುದು ಯಾವ ಮಂಪರಿನಲ್ಲಿದೆಯೋ ಅದರಿಂದ ಅದನ್ನು ಎಚ್ಚರಗೊಳಿಸಬೇಕಾಗಿದೆ. ಹಿಂದೂ ರಾಷ್ಟ್ರ, ಜನಾಂಗ, ಹಿಂದೂ ಭಾಷೆಗಳನ್ನು ಕೀರ್ತಿಸುವವರಷ್ಟೇ ಇಲ್ಲಿಗೆ ಸೇರಿದವರು. ಉಳಿದವರೆಲ್ಲ-ಹಿಂದೂಗಳಲ್ಲದವರೆಲ್ಲ-ದೇಶದ್ರೋಹಿಗಳು, ಶತ್ರುಗಳು ಅಥವಾ ನಿಮಗೆ ಉದಾರ ಮನಸ್ಕರಾಗಿರಬೇಕು ಎಂಬ ಹಟ ಇದ್ದರೆ ಮಹಾ ಮೂರ್ಖರು ಅಂತ ಅವರನ್ನು ಕರೆಯಬಹುದು. ಶತ್ರುಗಳು, ದೇಶದ್ರೋಹಿಗಳು ಅನ್ನುವುದು ವಿಷಯ. ಆದರೆ ಬೇಕಿದ್ದರೆ ಅವರನ್ನು ಕಡುಮೂರ್ಖರು ಅಂತ ಅನ್ನಿ.

ನಮ್ಮ ದೇಶದೊಳಗೆ ಇರುವ ನಮ್ಮವರಲ್ಲದ ಜನರೆಲ್ಲರೂ ಒಂದು. ಅವರು ಹಿಂದೂ ಧರ್ಮ, ಸಂಸ್ಕೃತಿ, ಭಾಷೆಯನ್ನು ತಮ್ಮದನ್ನಾಗಿಮಾಡಿಕೊಳ್ಳತಕ್ಕದ್ದು ಹಿಂದೂ ಧರ್ಮ ಮತ್ತು ಸಂಸ್ಕೃತಿ ಹಾಗೂ ಭಾಷೆಯನ್ನು ಗೌರವಿಸುವ, ಪ್ರತಿಪಾದಿಸುವ, ಬುದ್ಧಿ ಅವರಿಗೆ ಬರಬೇಕು. ತಮ್ಮ ಸ್ವತಂತ್ರ ಚಹರೆಗಳನ್ನು ಅವರು ಕಳೆದುಕೊಳ್ಳಬೇಕು. ಅವರು ಏನನ್ನೂ ಕೇಳುವಂತಿಲ್ಲ. ಅವರಿಗೆ ಯಾವ ಹಕ್ಕುಗಳೂ ಇಲ್ಲ. ಪ್ರಾಶಸ್ತ್ಯಗಳಂತೂ ಇಲ್ಲವೇ ಇಲ್ಲ. ಅವರಿಗೆ ನಾಗರಿಕ ಪ್ರಜೆಗಳಾಗಿರುವ ಹಕ್ಕು ಕೂಡ ಇಲ್ಲ. ಸುಮ್ಮನೆ ಒಂದು ಮೂಲೆಯಲ್ಲಿ ನಮ್ಮ ಕೃಪೆಯಿದ್ದಷ್ಟು ಕಾಲ ಅವರು ಇರಬಹುದು. ಇದರದ್ದೊಂದು ಪ್ರಯೋಗ ಹಿಟ್ಲರ್‌ನ ಜರ್ಮನಿಯಲ್ಲಿ ನಡೆಯಿತು. ಸರಿಯಾಗಿ ಯಾರಿಗೆ ಬುದ್ಧಿ ಕಲಿಸಬೇಕಾಗಿತ್ತೋ ಅದನ್ನು ಅವರು ಅಲ್ಲಿ ಮಾಡಿ ತೋರಿಸಿದರು. ಅಲ್ಲಿಂದ ನಾವು ಕಲಿಯಬೇಕಾದ್ದು ಬಹಳ ಇದೆ’’.

-3-

ಸ್ವರಾಜ್ಯ

1909ರಲ್ಲಿ ಹಿಂದ್ ಸ್ವರಾಜ್ಯ ಎಂಬ, ಇವತ್ತಿಗೂ ಪ್ರಸ್ತುತವಾಗಿರುವ ಉಜ್ವಲ ಕೃತಿಯನ್ನು ಬರೆದ ಮಹಾತ್ಮಾ ಗಾಂಧಿಯವರ ಕಲ್ಪನೆಯಲ್ಲಿ ರಾಷ್ಟ್ರ ಎಂಬುದಕ್ಕೆ ಅಷ್ಟಾಗಿ ಜಾಗ ಇಲ್ಲ. ಬದಲಿಯಾಗಿ ಅವರು ಪ್ರತಿಪಾದಿಸಿದ್ದು, ಸ್ವರಾಜ್ಯವನ್ನು ಕೊನೆಯ ಮನುಷ್ಯನ ಕಣ್ಣೀರ ಹನಿಯನ್ನೂ ತೊಡೆಯಬಹುದಾದ, ಎಲ್ಲ ಕೈಗಳಿಗೂ ದುಡಿಯುವ ಶಕ್ತಿಯನ್ನು ಕೊಡಬಹುದಾದ, ಎಲ್ಲರೂ ಸ್ವಾಭಿಮಾನದಲ್ಲಿ ಬದುಕಬಹುದಾದ ‘ಸರ್ವೋದಯ’ ಅವರ ಕನಸು. ಅವರ ಹೋರಾಟ ಬ್ರಿಟಿಷರ ವಿರುದ್ಧ ಎಂಬಂತಿಲ್ಲ. ಎಲ್ಲ ಸ್ವರೂಪದ ಅಧಿಕಾರ ಕೇಂದ್ರಗಳನ್ನು ಅವರು ಪ್ರಶ್ನಿಸಿದವರು, ರಾಷ್ಟ್ರವನ್ನೂ ಸೇರಿದಂತೆ. ಆದರೆ ದಾದಾಭಾಯಿ ನವರೋಜಿ 1900ರಲ್ಲಿ ಬರೆದ Poverty and the Un-Brtish Rule in India ವನ್ನು ಅವರು ಗಮನಿಸಿದ್ದರು. ನಮ್ಮ ಆರ್ಥಿಕ ಸಂಪತ್ತಿನ ಲೂಟಿಯನ್ನು ತಡೆಯಲು, ರಾಜಕೀಯ ಸಂಘಟನಾತ್ಮಕ ಶಕ್ತಿಯನ್ನು ರೂಢಿಸಲು, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸ್ವಾವಲಂಬನೆಯನ್ನು ಉಳಿಸಿಕೊಳ್ಳಲು ಅವರಿಗೆ ‘‘ರಾಷ್ಟ್ರ’’ ಎಂಬ ಪರಿಕಲ್ಪನೆ, ಸೀಮಿತವಾಗಿಯಷ್ಟೆ ಬೇಕಿತ್ತು. ಹಿಂದ್ ಸ್ವರಾಜ್ಯದಲ್ಲಿ ಬರುವ ಅವರ ಈ ಮಾತನ್ನು ನಾವು ಅಗತ್ಯ ಗಮನಿಸಬೇಕು:

ಹಿಂದ್‌ಸ್ವರಾಜ್ಯದಲ್ಲಿ ಓದುಗ ಕೇಳುವ ಪ್ರಶ್ನೆ:

ಮೊಹಮದನಿಸಮ್(ಇಸ್ಲಾಂ) ಭಾರತದೊಳಗೆ ಪ್ರವೇಶಮಾಡಿ ಈ ರಾಷ್ಟ್ರವನ್ನೇ ನಿರ್ನಾಮ ಗೊಳಿಸಲಿಲ್ಲವಾ?

ಉತ್ತರ: ಹಲವು ಧರ್ಮಗಳಿಗೆ ಸೇರಿದ ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣದಿಂದ ಇದು ಒಂದು ರಾಷ್ಟ್ರವಲ್ಲ ಎಂಬ ವಾದವನ್ನು ಒಪ್ಪಲಾಗದು. ಹೊರಗಿನಿಂದ ಯಾರೋ ಬಂದರು ಎಂದರೆ ರಾಷ್ಟ್ರ ಭ್ರಷ್ಟ್ರವಾಗಲಾರದು. ಜಗತ್ತಿನಾದ್ಯಂತ ಎಲ್ಲ ಜನರಿಗೂ ತಾವಿರುವ ಸುತ್ತಮುತ್ತಲ ಜೊತೆ ಹೊಂದಿಕೊಳ್ಳುವುದು ಲಗಾಯ್ತಿನಿಂದಲೂ ಗೊತ್ತು. ಹಲವು ಜನವರ್ಗಗಳು ಜನಾಂಗಗಳು ಕೂಡಿ ಬದುಕಿದಾಗ ಮಾತ್ರವೇ ಅದನ್ನು ಒಂದು ರಾಷ್ಟ್ರ ಎಂದು ಕರೆಯಬಹುದು... ಧರ್ಮ ಎಂದರೆ ಏನು? ನಿಜಕ್ಕೂ ಹೇಳಬೇಕೆಂದರೆ, ಎಷ್ಟು ಜನರೋ ಅಷ್ಟು ಧರ್ಮಗಳು. ಅವು ನಾಲ್ಕಾರು ಹಣೆಪಟ್ಟಿಗಳಲ್ಲ, ನೀವು ನಿಮ್ಮ ದೇವರಿಗೆ ಮಾಡಿದ ಪ್ರಾರ್ಥನೆ ನಿಮ್ಮ ಮತ್ತು ನಿಮ್ಮ ದೇವರ ನಡುವಿನ ಖಾಸಗಿ ವಿಷಯ ಬೀದಿ ಮಾತಲ್ಲ.

-4-

ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರೀಯವಾದ, ರಾಷ್ಟ್ರಪ್ರಭುತ್ವ

ಬೆಳದಿಂಗಳಲ್ಲಿ ಕೊಡೆಬಿಡಿಸುವ, ಪಕ್ಕಾ ಪರದೇಶಿಯಾದ, ನಿನ್ನೆ ಮೊನ್ನೆ ಬೆಳೆದ ‘‘ರಾಷ್ಟ್ರ’’ ಎಂಬ ಅಣಬೆಯನ್ನು ಸರಿಯಾಗಿ ಅಂದಾಜಿಸುವುದು ಅಗತ್ಯವಿದೆ: ಭಾರತ ರಾಷ್ಟ್ರದೊಳಗೆ ಮಹಾರಾಷ್ಟ್ರ ಎಂಬ ಭೂಭಾಗವಿದೆ. ಮಹಾರಾಷ್ಟ್ರಕ್ಕೂ ಕರ್ನಾಟಕಕ್ಕೂ ಜಗಳ ತಂದಿಟ್ಟ ರಾಷ್ಟ್ರ ಅಲ್ಲಿ ದಿಲ್ಲಿಯಲ್ಲಿ ಹಾಯಾಗಿದೆ. ಗಡಿಗೆರೆಯಲ್ಲಿರುವ ಸೈನಿಕರನ್ನೇ ಅದು ರಾಷ್ಟ್ರ ಎಂದು ಬಿಂಬಿಸುತ್ತಿದೆ. ಮಾತೆಯರು ಸೈನಿಕರನ್ನು ಹೆರಲಿ, ಗಂಡಸಾದವ ಗಡಿಗೆ ತೆರಳಲಿ ಎಂದು ಮೂರು ಬಿಟ್ಟವರು ತ್ರಿಶಂಕು ಸ್ವರ್ಗದಿಂದ ಆಜ್ಞಾಪಿಸುತ್ತಲಿರುವ ಕಾಲದಲ್ಲಿ, ಈ ಕೆಲವು ಪ್ರಾಥಮಿಕ ವಿವರಣೆಗಳು:

ರಾಷ್ಟ್ರ, ದೇಶ, ನಾಡು ಎಂಬಿತ್ಯಾದಿ ಪರಿಕಲ್ಪನೆಗಳಿಗೊಂದು ಸರಳತೆಯಿದೆ. ನಮ್ಮ ಸುತ್ತಮುತ್ತಲಿನ ಜನ, ಆಚಾರ, ಧರ್ಮ, ನಡವಳಿಕೆ ಅದಷ್ಟೇ ನಮಗೆ ಗೊತ್ತಿರುವುದು. ಅದು ಹೊಂದಾಣಿಕೆಯಲ್ಲಿ, ನಮ್ಮ ಮನೆ ಸಮೀಪದಲ್ಲಿ ಇರುವಂಥದು. ಸಂಭಾವಿತತನ ಕಲಿಸುವಂಥದ್ದು. ಆದರೆ ರಾಷ್ಟ್ರೀಯತೆ ಎಂಬುದು ಅಷ್ಟು ಸರಳವಲ್ಲ. ಜಿಗುಟು, ಅಮೂರ್ತ ಕೂಡ. ಆದರೂ ನಮ್ಮ ನೆಲ ಜಲ ಭಾಷೆ ಚಹರೆ ಎನ್ನುವುದಾದರೆ, ನಾವು ಕಾಣದ ಸ್ವಲ್ಪ ದೊಡ್ಡ ಜನವರ್ಗವೂ ನಮ್ಮವರೇ. ಅದೂ ಸಮಸ್ಯೆಯಲ್ಲ. ಕಣ್ಣಾರೆ ಕಾಣದವರ ಬಗೆಗೂ ಅಭಿಮಾನ ಅಸಹಜವಲ್ಲ.

    ಆದರೆ ರಾಷ್ಟ್ರೀಯವಾದ ಎಂಬುದು ಒಂದು ಭೀಕರ ಸಮಸ್ಯೆ: ಭಾಷೆ, ಧರ್ಮ(?), ಸಂಸ್ಕೃತಿ(?), ಒಂದಲ್ಲದೆ ಇನ್ನೊಂದಲ್ಲ ಎಂಬ ವಾದ ಹಿಂಸೆಗೆ, ದ್ವೇಷಕ್ಕೆ, ತಾರಾತಮ್ಯಕ್ಕೆ, ಸದಾ ಕುದಿಯುವ ಜ್ವಾಲಾಮುಖಿ ಅಗ್ನಿ ಪಿಂಡಕ್ಕೆ ಮೂಲ ಕಾರಣ. ರಾಷ್ಟ್ರ ಎಂಬ ಸರಿಸುಮಾರು ಸರಳ ಪರಿಕಲ್ಪನೆ ಹರಳುಗಟ್ಟಿ ಜಿಗುಟಾಗಿ, ಸದೆಬಡಿಯಬಹುದಾದ ಅಸ್ತ್ರವಾದಾಗ ಅದು ರಾಷ್ಟ್ರೀಯವಾದ.

ರಾಷ್ಟ್ರೀಯವಾದ ಅಷ್ಟು ಜಿಗುಟಾಗಿದ್ದರೂ, ಅದಕ್ಕೆ ರೆಕ್ಕೆ ಪುಕ್ಕಗಳು ಸಿಕ್ಕಿ ಅದು ಮಾರಣಾಂತಿಕವಾಗುವುದು ರಾಷ್ಟ್ರಪ್ರಭುತ್ವವಾದಾಗ, ವ್ಯವಸ್ಥೆ ‘‘ಪ್ರಜಾಪ್ರಭುತ್ವ’’ವೇ ಇರಬಹುದು. ಧೂರ್ತರು, ಮೂರ್ಖರು, ‘ಬಾತಿ’ನ ವೀರರು ಪ್ರಜಾಪ್ರಭುತ್ವದ ಕಾಂಡ ಕೊರಕ ಹುಳಗಳು. ಟೀ ಮಾರಿದವರಿಗೂ ಸರ್ವಾಧಿಕಾರದ ಮಟ್ಟಿಲು. ಸಂವಿಧಾನ, ನ್ಯಾಯಾಂಗವನ್ನೇ ಕೊಂಡರೆ ರಾಷ್ಟ್ರ ಎಂಬುದು ಸರಳ ರಾಷ್ಟ್ರವಲ್ಲ. ಅದು ಎಲ್ಲರ ಮೇಲೆ ಕಣ್ಣಿಟ್ಟ, ಜೈಲನ್ನು ರೆಡಿ ಇಟ್ಟ, ರಾಷ್ಟ್ರಪ್ರಭುತ್ವ. ಟೀ ಮಾತ್ರ ಯಾಕೆ, ದೇಶವನ್ನೇ ಮಾರಬಹುದು.

ಗಾಂಧಿಯ ಲೆಕ್ಕ ಇದಲ್ಲ. ಪಾರ್ಲಿಮೆಂಟನ್ನು ಅವರು ಇಲ್ಲಿ ಏನೂ ಹುಟ್ಟ್ಟದು ಎಂದು ಬಂಜೆಗೂ, ಎಲ್ಲರೂ ಬಾಯಿಗೆ ಬಂದಂತೆ ಮಾತಾಡಿ ಗಮನ ತಮ್ಮ ಕಡೆ ತಿರುಗಿಸಿಕೊಳ್ಳುವ ವೇಶ್ಯೆಗೂ ಹೋಲಿಸಿದ್ದರು.

ಧರ್ಮ-ಅಂದರೆ, ನೀತಿ/ನೈತಿಕತೆ ಹಾಗೂ ಆಧ್ಯಾತ್ಮಿಕತೆಯ ತುಡಿತವಿಲ್ಲದ ರಾಜಕೀಯವನ್ನು ಗಾಂಧಿ ತಿರಸ್ಕರಿಸಿದ್ದರು. ಸತ್ಯ ಮತ್ತು ಅಹಿಂಸೆ ಎಂಬ ಅಪರೂಪದ ನುಡಿಗಟ್ಟನ್ನು ಅವರು ರಾಜಕೀಯ ಕೇಂದ್ರಕ್ಕೆ ತರಲು ಪ್ರಯತ್ನಪಟ್ಟರು.

ಮಹಾಧಾರ್ಮಿಕರಾಗಿದ್ದ ಮಹಾತ್ಮಾ ಗಾಂಧಿ ಯಾವ ದೇವಸ್ಥಾನಗಳಿಗೂ ಹೋಗುತ್ತಿರಲಿಲ್ಲ. ಈಶ್ವರ ಅಲ್ಲಾ ತೇರೋ ನಾಮ್ ಎಂದು ಜೀವನ ಪೂರ್ತಿ ಭಜಿಸಿದ ಈ ಮಹಾತ್ಮಾ ತನ್ನ ಕೊನೆಗಾಲದಲ್ಲಿ ರವೀಂದ್ರನಾಥ್ ಠಾಗೂರರ ‘ಏಕ್ಲಾ ಚೊಲೋ’ ಗೀತೆಯನ್ನು ಗುನುಗಿಕೊಳ್ಳುತ್ತ ನವಾಖಲಿ, ಕಲ್ಕತ್ತಗಳಲ್ಲಿ ನಡೆಯುತ್ತಿದ್ದ ಹತ್ಯಾಕಾಂಡಗಳನ್ನು ಏಕಾಂಗಿಯಾಗಿ ಎದುರಿಸಿ ಹಿಮ್ಮೆಟ್ಟಿಸಿದರು. ರಾಮನ ಹೆಸರನ್ನೇ ಇಟ್ಟುಕೊಂಡ ಧೂರ್ತನೊಬ್ಬನ ಗುಂಡಿಗೆ ಬಲಿಯಾಗಿ ಸತ್ತಾಗ, ರಾಮ ಅವರ ನಾಲಗೆಯಲ್ಲಿ ಹುಟ್ಟಿದ, ‘ಹೇ ರಾಮ್’ ಎಂಬುದಾಗಿ. ಅದನ್ನೇ ತಿರುಚಿ ‘ಜೈ ಶ್ರೀರಾಮ್’ ಎಂಬ ಕೊಲೆೆಪಾತಕ ಭಾಷೆ ಈಗ ವಿಜೃಂಭಿಸುತ್ತಿದೆ. ಧರ್ಮವನ್ನು ರಾಜಕೀಯದ ಕೇಂದ್ರದಲ್ಲಿರಿಸಿ ರಾಜಕೀಯವನ್ನು ಪರಿಶುದ್ಧಗೊಳಿಸಬಯಸಿದ ಗಾಂಧಿಗೂ, ಧರ್ಮ ಎಂಬ ಜಡ ತತ್ವವನ್ನು ರಾಜಕೀಯದೊಡನೆ ವಿಷವಾಗಿ ಬೆರೆಸಿರುವ ಇಂದಿನ ರಾಜಕಾರಣಕ್ಕೂ ವ್ಯತ್ಯಾಸವೇನು?

-5-

ಧರ್ಮ ಎಂಬ ಮರೀಚಿಕೆ

ಮಹಾಧಾರ್ಮಿಕರಾಗಿದ್ದ ಮಹಾತ್ಮಾ ಗಾಂಧಿ ಯಾವ ದೇವಸ್ಥಾನಗಳಿಗೂ ಹೋಗುತ್ತಿರಲಿಲ್ಲ. ಈಶ್ವರ ಅಲ್ಲಾ ತೇರೋ ನಾಮ್ ಎಂದು ಜೀವನ ಪೂರ್ತಿ ಭಜಿಸಿದ ಈ ಮಹಾತ್ಮಾ ತನ್ನ ಕೊನೆಗಾಲದಲ್ಲಿ ರವೀಂದ್ರನಾಥ್ ಠಾಗೂರ್ ‘ಏಕ್ಲಾ ಚೊಲೋ’ ಗೀತೆಯನ್ನು ಗುನುಗಿಕೊಳ್ಳುತ್ತ ನವಾಖಲಿ, ಕಲ್ಕತ್ತಗಳಲ್ಲಿ ನಡೆಯುತ್ತಿದ್ದ ಹತ್ಯಾಕಾಂಡಗಳನ್ನು ಏಕಾಂಗಿಯಾಗಿ ಎದುರಿಸಿ ಹಿಮ್ಮೆಟ್ಟಿಸಿದರು. ರಾಮನ ಹೆಸರನ್ನೇ ಇಟ್ಟುಕೊಂಡ ಧೂರ್ತನೊಬ್ಬನ ಗುಂಡಿಗೆ ಬಲಿಯಾಗಿ ಸತ್ತಾಗ, ರಾಮ ಅವರ ನಾಲಗೆಯಲ್ಲಿ ಹುಟ್ಟಿದ, ‘ಹೇ ರಾಮ್’ ಎಂಬುದಾಗಿ. ಅದನ್ನೇ ತಿರುಚಿ ‘ಜೈ ಶ್ರೀರಾಮ್’ ಎಂಬ ಕೊಲೆೆಪಾತಕ ಭಾಷೆ ಈಗ ವಿಜೃಂಭಿಸುತ್ತಿದೆ. ಧರ್ಮವನ್ನು ರಾಜಕೀಯದ ಕೇಂದ್ರದಲ್ಲಿರಿಸಿ ರಾಜಕೀಯವನ್ನು ಪರಿಶುದ್ಧ ಗೊಳಿಸಬಯಸಿದ ಗಾಂಧಿಗೂ, ಧರ್ಮ ಎಂಬ ಜಡ ತತ್ವವನ್ನು ರಾಜಕೀಯದೊಡನೆ ವಿಷವಾಗಿ ಬೆರೆಸಿರುವ ಇಂದಿನ ರಾಜಕಾರಣಕ್ಕೂ ವ್ಯತ್ಯಾಸವೇನು? ನಿಜಕ್ಕೂ, ಧರ್ಮ ಎಂದರೆ ಏನು?

ಸಾರಾಂಶವಾಗಿ ಹೇಳುವುದಾದರೆ, ಧರ್ಮ ಎಂಬುದನ್ನು ನಾಲ್ಕು ಬಗೆಗಳಲ್ಲಿ ವಿವರಿಸಬಹುದು: ವೈಯಕ್ತಿಕ ಶುಚಿತ್ವ/ ಸಂಸ್ಕಾರ; ಸಾಮುದಾಯಿಕ ಮದುವೆ/ ಮುಂಜಿ/ಸಾವು/ ಹಬ್ಬ-ಇವೆರಡು ಇವುಗಳನ್

Writer - ಎಚ್. ಪಟ್ಟಾಭಿರಾಮ ಸೋಮಯಾಜಿ

contributor

Editor - ಎಚ್. ಪಟ್ಟಾಭಿರಾಮ ಸೋಮಯಾಜಿ

contributor

Similar News