ಲಾಲೂ ಪ್ರಸಾದ್ ಅನಾರೋಗ್ಯ ಉಲ್ಬಣ: ದಿಲ್ಲಿ ಆಸ್ಪತ್ರೆಗೆ ಸ್ಥಳಾಂತರಕ್ಕೆ ಸಿದ್ಧತೆ
ಪಾಟ್ನಾ: ಜೈಲಿನಲ್ಲಿರುವ ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಇಂದು ದಿಲ್ಲಿಯ ಏಮ್ಸ್ ಗೆ ಕರೆದೊಯ್ಯಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿಯಲ್ಲಿರುವ ಅವರ ಪುತ್ರ ಹಾಗೂ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರ ಕುಟುಂಬವು ಮಾಜಿ ಮುಖ್ಯಮಂತ್ರಿ ಲಾಲೂ ಅವರೊಂದಿಗೆ ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಗೆ ಆಗಮಿಸುವ ಸಾಧ್ಯತೆಯಿದೆ.
ಲಾಲೂ ಯಾದವ್ ಅವರು ರಾಂಚಿಯ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದವ್ ಅವರು ಬಿಹಾರ ಮೇವು ಹಗರಣದಲ್ಲಿ ತಪ್ಪಿತಸ್ಥರಾದ ಬಳಿಕ ರಾಂಚಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಲಾಲೂ ಅವರನ್ನು ದಿಲ್ಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗುವುದು. ಅವರನ್ನು ಏಮ್ಸ್ ಗೆ ಸ್ಥಳಾಂತರಿಸಬಹುದು ಎಂದು ಜೈಲಿನ ವೈದ್ಯಕೀಯ ಮಂಡಳಿ ತಿಳಿಸಿದೆ. ಲಾಲೂ ಅವರನ್ನು ದಿಲ್ಲಿಗೆ ಸ್ಥಳಾಂತರಿಸಲು ಜೈಲು ಆಡಳಿತವು ಕೆಳ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ.