ಅಕ್ರಮ ಗಣಿಗಾರಿಕೆಗೆ ಸಿಎಂ ಯಡಿಯೂರಪ್ಪ ಕುಮ್ಮಕ್ಕು ನೀಡುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

Update: 2021-01-23 11:36 GMT

ಬೆಂಗಳೂರು, ಜ.23: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. 

ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಕಾರಣ ಎಂದು ದೂರಿದರು.

ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ ? ಎಂದು ಪ್ರಶ್ನಿಸಿದರು. 

ಇದು ಅಕ್ರಮ ಮನೆ, ಜಮೀನು ಸಕ್ರಮ ಮಾಡುವುದಲ್ಲ. ಹಾಗಾದರೆ ಗಣಿ ಇಲಾಖೆಯ ಕಾನೂನು ಇರುವುದೇಕೆ. ಮುಖ್ಯಮಂತ್ರಿಗಳ ಹೇಳಿಕೆ  ಖಂಡನೀಯ. ಬೇಜವಾಬ್ದಾರಿತನದ ಪರಮಾವಧಿ. ಮುಖ್ಯಮಂತ್ರಿಗಳೇ ಕಾನೂನು ಬಾಹಿರ ಕ್ರಮಗಳನ್ನು ಸಕ್ರಮ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಅದು ಅಕ್ರಮಗಳಿಗೆ ಸಹಕರಿಸಿದಂತೆ ಆಗುತ್ತದೆ. ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರಲಿ, ಅದರಲ್ಲಿ ಯಾವುದೇ ಪಕ್ಷದವರು ಭಾಗಿಯಾಗಿರಲಿ. ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು. 

ಸಿಎಂ, ಉಸ್ತುವಾರಿ ಸಚಿವರೇ ಹೊಣೆ 
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿರುವ ದುರಂತ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೆ. ಆಂಧ್ರದಿಂದ ಪರವಾನಿಗೆ ಇಲ್ಲದೆ ಜಿಲಿಟಿನ್ ಮತ್ತು ಡೈನಮೇಟ್ ತರಲಾಗಿತ್ತು. ಇದು ಮೊದಲ ಅಪರಾಧ. ತಂದಿದ್ದನ್ನು ಸುರಕ್ಷಿತವಾದ ಜಾಗದಲ್ಲಿ ಇಡದೇ ಹೋಗಿದ್ದಿದು ಎರಡನೇ ಅಪರಾಧ. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ಈ ದುರಂತದಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿಯೇ ಪರವಾನಿಗೆ ಇಲ್ಲದೆ ಯದ್ವಾತದ್ವಾ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದರೆ ಇದು ಜಿಲ್ಲಾಡಳಿತರ ವೈಫಲ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಇದರ ಹೊಣೆ ಹೊರಬೇಕು ಎಂದರು. 

ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಈಶ್ವರಪ್ಪ ಅವರು ಮಾತನಾಡುತ್ತಾ, ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಊರಿನ ಒಳ್ಳೆಯದಕ್ಕೆ ಕಣ್ಣು ಮುಚ್ಚಿಕೊಂಡಿರಿ ಎಂದು ಸಲಹೆ ನೀಡಿದ್ದಾರೆ. ಜನಪ್ರತಿನಿಧಿಯೇ ಹೀಗೇ ಹೇಳಿದ ಬಳಿಕ ಅಧಿಕಾರಿಗಳು ಬೇವಾಬ್ದಾರಿಯಿಂದ ಕೆಲಸ ಮಾಡದೆ ಇನ್ನೇನು ಮಾಡಿಯಾರು? ಜಿಲ್ಲೆಯಲ್ಲಿ ಎಲ್ಲ ಕ್ವಾರಿಗಳು ಮತ್ತು ಕ್ರಷರ್ ಗಳು ಸಕ್ರಮವಾಗಿ ನಡೆಯುತ್ತಿವೆ ಎಂದೂ ಈಶ್ವರಪ್ಪ ಅವರೇ ಹೇಳಿದ್ದಾರೆ. ಆದರೆ, ಆಯನೂರು ಮಂಜುನಾಥ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದಾರೆ. ಮಂಜುನಾಥ್ ಅವರು ಬಿಜೆಪಿಯ ಹಿರಿಯ ನಾಯಕರು. ವಿಧಾನ ಪರಿಷತ್ತಿನ ಹಾಲಿ ಸದಸ್ಯರು ಎಂದು ಹೇಳಿದರು. 

ಕ್ರಷರ್ ನಡೆಸುತ್ತಿದ್ದವರ ಬೇಜವಾಬ್ದಾರಿತನವೂ ಇದರಲ್ಲಿ ಎದ್ದು ಕಾಣುತ್ತಿದೆ. ನನ್ನ ಪ್ರಕಾರ ಇದು ಗಂಭೀರವಾದ ವಿಷಯ. ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಹಾಗೂ ಆಯನೂರು ಮಂಜುನಾಥ್ ಮತ್ತು ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸತ್ಯ ಏನೆಂದು ಗೊತ್ತಾಗಬೇಕು. ಮೃತರ ಕುಟುಂಬದವರಿಗೆ ನ್ಯಾಯಯುತ ಪರಿಹಾರ ಘೋಷಣೆ ಮಾಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ
ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಇಡೀ ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ. ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದೇವೋ ಅಥವಾ ಇಲ್ಲವೋ ಎಂಬ ಅನುಮಾನ ಇದರಿಂದ ಉಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋದನನ ಸರ್ಕಾರವಾಗಿದೆ ಎಂದು ಹಂಪನಾ ಅವರು ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇದೆ. ಯಾರೂ ಅದನ್ನು ನಿಯಂತ್ರಿಸಲು ಆಗದು. 

ಹಂ.ಪ. ನಾಗರಾಜಯ್ಯ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಯಾರೋ ದೂರು ಕೊಟ್ಟರು ಎಂಬ ಕಾರಣಕ್ಕೆ ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುವುದು ಪ್ರಜಾಸತ್ತೆಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯಡಿಯೂರಪ್ಪ ಅವರಿಗೆ ಗೌರವ ಇದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ರಾಜಭವನ ಚಲೋ ವೇಳೆ ನಡೆದ ಘಟನೆ ಸಂಬಂಧ ಶಾಸಕರಾದ ಸೌಮ್ಯ ರೆಡ್ಡಿಯವರೇ ದೂರು ನೀಡಿದ್ದಾರೆ. ಆ ದೂರು ಏನಾಯಿತು. ಸೌಮ್ಯ ರೆಡ್ಡಿ ಹಾಗೂ ಅವರ ವಿರುದ್ಧ ನೀಡಿರುವ ದೂರುಗಳನ್ನೂ ಸ್ವೀಕಾರ ಮಾಡಿ ತನಿಖೆ ಜರುಗಿಸಲಿ. ಸೌಮ್ಯರೆಡ್ಡಿ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಅದರು ಅವರ ದೊಡ್ಡಗುಣ ಎಂದರು.

ಡಿ.28ರಂದು ಕಾಂಗ್ರೆಸ್ ಶಾಸಕಾಂಗ ಸಭೆ
ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 28 ರಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಅಂದು ತೀರ್ಮಾನ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿಯ ಎಡಗೈ ಗುಂಪಿನ ನಾಯಕರಿಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕು. ಇದು ನನ್ನ ಅಭಿಪ್ರಾಯ ಎಂದರು. 

ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ಸುಲಭವಾಗಿ ರದ್ದುಗೊಳಿಸಲಾಗದು. ಅದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗದು. ಈಶ್ವರಪ್ಪ ಅವರಿಗೆ ಕಾನೂನು ಗೊತ್ತಿಲ್ಲ. ಬಿಜೆಪಿಗೆ ವಲಸೆ ಹೋದವರಿಗೆ ಈಗ ಅತೃಪ್ತಿ ಕಾಡುತ್ತಿದೆ. ವಲಸೆ ಹೋದವರು ಮೊದಲು ಯಡಿಯೂರಪ್ಪ ಅವರನ್ನು ಮಾತು ತಪ್ಪದ ಮಗ ಎಂದು ಹಾಡಿ ಹೊಗಳುತ್ತಿದ್ದರು. ಈಗ ನಾಲಿಗೆ ಇಲ್ಲದ ನಾಯಕ ಎನ್ನುತ್ತಿದ್ದಾರೆ. ಪ್ರಳಯವಾದರೂ ಸರಿ, ವಲಸಿಗರನ್ನು ಕಾಂಗ್ರೆಸ್‍ಗೆ ಮತ್ತೆ ಸೇರಿಸುವುದಿಲ್ಲ ಎಂದು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News