ಪೊಲೀಸರೆದುರೇ ಚಾಕುವಿನಿಂದ ಚುಚ್ಚಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಆಸ್ಪತ್ರೆಗೆ ದಾಖಲು
Update: 2021-02-02 16:21 GMT
ಮೈಸೂರು,ಫೆ.2: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ತನಗೆ ತಾನೇ ಚಾಕುವಿನಿಂದ ಇರಿದುಕೊಂಡು ಸಾರ್ವಜನಿಕರು, ಪೊಲೀಸ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದಿದೆ.
ರಾಧಾಕೃಷ್ಣ ಹೆಸರಿನ ಸುಮಾರು 45ರ ಆಸಿಪಾಸಿನ ವ್ಯಕ್ತಿಯೋರ್ವ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ತನಗೆ ಸಾಲ ನೀಡಿದವರು ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ತನಗೆ ಕಿರುಕುಳವನ್ನು ತಾಳಲು ಸಾಧ್ಯವಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿ ಸಾರ್ವಜನಿಕರು ಮತ್ತು ಪೊಲೀಸ್ ಎದುರೇ ಎದೆಗೆ ಚಾಕುವಿನಿಂದ ಚುಚ್ಚಿಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.
ಈ ಕುರಿತು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಎಲ್ಲಿಯ ವ್ಯಕ್ತಿ, ಯಾಕಾಗಿ ಈ ರೀತಿ ಮಾಡಿಕೊಂಡ ಎಂಬಿತ್ಯಾದಿ ವಿಚಾರಗಳು ತನಿಖೆಯಿಂದ ತಿಳಿದು ಬರಬೇಕಿದೆ.