ಚಿಕ್ಕಮಗಳೂರು ಡಿಸಿ, ಎಡಿಸಿ, ಸಿಇಒ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್.ರಮೇಶ್ ನೇಮಕ

Update: 2021-02-13 12:56 GMT
ಡಾ.ಬಗಾದಿ ಗೌತಮ್

ಚಿಕ್ಕಮಗಳೂರು, ಫೆ.13: ಕಳೆದ ಎರಡು ವರ್ಷಗಳಿಂದ ಇಲ್ಲಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸತ್ತಿದ್ದ ಐಎಎಸ್ ಅಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ವರ್ಗಾಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಡಿಸಿಯೊಂದಿಗೆ ಎಡಿಸಿ ಡಾ.ಕುಮಾರ್ ಹಾಗೂ ಜಿಪಂ ಸಿಇಒ ಎಸ್.ಅಶ್ವತಿ ಅವರನ್ನೂ ವರ್ಗಾವಣೆ ಮಾಡಿ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಗಾದಿ ಗೌತಮ್ ಅವರನ್ನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಕ ಮಾಡಿ ಸರಕಾರ ವರ್ಗಾಯಿಸಿದೆ. ಡಾ.ಬಗಾದಿ ಗೌತಮ್ ಅವರ ಪತ್ನಿ ಹಾಗೂ ಜಿಪಂ ಸಿಇಒ ಆಗಿ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಳೆದ 6 ತಿಂಗಳುಗಳಿಂದ ರಜೆಯಲ್ಲಿದ್ದ ಐಎಎಸ್ ಅಧಿಕಾರಿ ಎಸ್.ಅಶ್ವತಿ ಅವರನ್ನೂ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ಅಶ್ವಥಿ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಎಡಿಸಿ ಡಾ.ಕುಮಾರ್ ಅವರನ್ನು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್.ರಮೇಶ್ ನೇಮಕ
ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆಗೊಂಡಿರುವ ಡಿಸಿ ಡಾ.ಬಗಾದಿಗೌತಮ್ ಅವರ ಸ್ಥಾನಕ್ಕೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹಾಗೂ ಐಎಎಸ್ ಅಧಿಕಾರಿ ಕೆ.ಎನ್.ರಮೇಶ್ ಅವರನ್ನು ವರ್ಗಾಯಿಸಿ ಸರಕಾರ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News