ಎಎನ್‍ಜಿ ಆಧಾರಿತ ಟ್ರ್ಯಾಕ್ಟರ್ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2021-02-13 15:04 GMT

ಬೆಂಗಳೂರು, ಫೆ. 13: ದೇಶದಲ್ಲಿ ಇದೇ ಮೊದಲ ಬಾರಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಒಡೆತನದ ಎಂಆರ್‍ಎನ್ ಸಮೂಹ ಸಂಸ್ಥೆಯ ಸಂಕುಚಿತಗೊಂಡ ನೈಸರ್ಗಿಕ ಅನಿಲ(ಸಿಎನ್‍ಜಿ) ಆಧಾರಿತ ಟ್ರ್ಯಾಕ್ಟರ್ ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದ್ದಾರೆ.

ಮೊದಲ ಹಂತದಲ್ಲಿ 500 ಡೀಸೆಲ್ ಟ್ರ್ಯಾಕ್ಟರ್ ಗಳನ್ನು ಸಿಎನ್‍ಜಿ ಎಂಜಿನ್ ಟ್ರ್ಯಾಕ್ಟರ್ ಗಳಾಗಿ ಪರಿವರ್ತಿಸಿ, 2023ರ ವೇಳೆಗೆ 1,500 ಟ್ರ್ಯಾಕ್ಟರ್ ಗಳನ್ನು ಸಿಎನ್‍ಜಿ ಟ್ರ್ಯಾಕ್ಟರ್ ಗಳಾಗಿ ಪರಿವರ್ತಿಸುವ ಗುರಿ ಹೊಂದಿದೆ. ಎಂಆರ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಮೊದಲ ಸಿಎನ್‍ಜಿ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಎಂಆರ್‍ಎನ್ ಸಂಸ್ಥೆ ತಯಾರಿಸುವ ಸಿಎನ್‍ಜಿ ಟ್ರ್ಯಾಕ್ಟರ್ ಎಂಜಿನ್ 10ರಿಂದ 15 ವರ್ಷಗಳಷ್ಟು ಬಾಳಿಕೆ ಬರಲಿವೆ ಎಂದು ತಿಳಿಸಿದೆ. ಸದ್ಯದಲ್ಲೇ ಸಿಎನ್‍ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಎಂಜಿನ್ ಪರಿವರ್ತನೆ ಮತ್ತು ಸಿಎನ್‍ಜಿ ಅನಿಲ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರ್ಯಾಕ್ಟರ್ ಗಳನ್ನು ಸಿಎನ್‍ಜಿ ಟ್ರ್ಯಾಕ್ಟರ್ ಗಳನ್ನಾಗಿ ಪರಿವರ್ತಿಸಿ ವಾರ್ಷಿಕ 1.5 ಲಕ್ಷ ರೂ.ಗಳಿಗಿಂತ ಹೆಚ್ಚು ಇಂಧನ ವೆಚ್ಚ ಉಳಿಸಬಹುದು. ಪ್ರಸ್ತುತ ಡೀಸೆಲ್ ಬೆಲೆ ಲೀಟರ್ ಗೆ 77 ರೂ.ಗಳಿಗೂ ಹೆಚ್ಚಿದ್ದು, ಪ್ರತಿ ಕೆಜಿ ಸಿಎನ್‍ಜಿ ಬೆಲೆ 42 ರೂ.ಮಾತ್ರ ಇರುವುದರಿಂದ ಹಣ ಉಳಿತಾಯಕ್ಕೆ ದಾರಿಯಾಗಲಿದೆ. ಟ್ರ್ಯಾಕ್ಟರ್ ಗಳ ದಕ್ಷತೆಯನ್ನು ಹೆಚ್ಚಿಸಲು ಇದು ಅನುಕೂಲಕರವಾಗಿದ್ದು, ವಾಯು ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಅಲ್ಲದೆ, ಡೀಸೆಲ್ ಎಂಜಿನ್‍ಗೆ ಹೋಲಿಸಿದರೆ ಸಿಎನ್‍ಜಿ ಇಂಜಿನ್ ಹೆಚ್ಚು ಶಕ್ತಿ ಉತ್ಪಾದಿಸುತ್ತದೆ ಎಂದು ತಿಳಿಸಲಾಗಿದೆ.

ಸಿಎನ್‍ಜಿ ಶುದ್ಧ ಇಂಧನವಾಗಿದ್ದು, ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿದ್ದು, ಎಂಜಿನ್‍ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿಎನ್‍ಜಿ ಇಂಧನದಿಂದ 1 ಟ್ರಿಲಿಯನ್ ಮೊತ್ತದ ತೈಲ ಉಳಿತಾಯವಾಗಲಿದ್ದು, ಸರಳ ನಿರ್ವಹಣೆಯನ್ನೂ ಮಾಡಬಹುದಾಗಿದೆ. ಸಿಎನ್‍ಜಿ ಟ್ಯಾಂಕ್‍ಗಳು ಬಿಗಿಯಾದ ಮುದ್ರೆ ಹೊಂದಿದ್ದು, ಇಂಧನ ತುಂಬುವಾಗ ಅಥವಾ ಸೋರಿಕೆಯಾದಾಗ ಸ್ಫೋಟದ ಸಾಧ್ಯತೆಯನ್ನು ಕಡಿಮೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

ಆತ್ಮನಿರ್ಭರ ಭಾರತ ಯೋಜನೆಯಡಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂಆರ್‍ಎನ್ ಸಂಸ್ಥೆ ತಿಳಿಸಿದೆ.

ಸಚಿವರಾದ ನಿತಿನ್ ಗಡ್ಕರಿ, ನರೇಂದ್ರ ಸಿಂಗ್ ತೋಮರ್, ಧಮೇರ್ಂದ್ರ ಪ್ರಧಾನ್, ಪರಶೋತ್ತಮ್ ರೂಪಾಲ, ಜನರಲ್ ವಿ.ಕೆ.ಸಿಂಗ್, ಎಂಆರ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಸೇರಿದಂತೆ ಮತ್ತಿತರರು ಲೋಕಾರ್ಪಣೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News