ಹಾಸನ: ಕ್ವಾಲಿಸ್- ಟಾಟಾ ಸುಮೋ ನಡುವೆ ಅಪಘಾತ; ನಾಲ್ವರು ಮೃತ್ಯು

Update: 2021-02-21 05:27 GMT

ಹಾಸನ, ಫೆ.21: ಎರಡು ವಾಹನಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಒಟ್ಟು 13 ಮಂದಿ ತೀವ್ರ ಗಾಯಗೊಂಡಿರುವ ಘಟನೆ ನಗರ ಹೊರವಲಯದ ಕೆಂಚಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತಪಟ್ಟವರನ್ನು ಕೆಜಿಎಫ್ ಮೂಲದ ಪ್ರದೀಪ್ ಕುಮಾರ್, ಪುನೀತ್, ನವೀನ್ ಕುಮಾರ್, ಸುನೀಲ್ ಕುಮಾರ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ನಾಲ್ವರು ಮಹಿಳೆಯರು, ಮೂವರು ಮಕ್ಕಳ ಸಹಿತ 13 ಮಂದಿಗೆ ಗಾಯಗೊಂಡಿದ್ದು, ಈ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಕ್ವಾಲಿಸ್ ಹಾಗೂ ಟಾಟಾ ಸುಮೋ ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಹಂಪ್ ಇದ್ದ ಕಾರಣ ಟಾಟಾ ಸುಮೋ ಚಾಲಕ ವಾಹನವನ್ನು‌‌ ಏಕಾಏಕಿ ನಿಧಾನ ಮಾಡಿದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ.

ಕ್ವಾಲಿಸ್ ವಾಹನದಲ್ಲಿ ಎಂಟು ಮಂದಿಯಿದ್ದು, ಅವರು ಕೆಜಿಎಫ್‌ನಿಂದ‌ ಉಡುಪಿಗೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸುವುದಕ್ಕಾಗಿ ತೆರಳುತ್ತಿದ್ದರೆನ್ನಲಾಗಿದೆ. ಹತ್ತು ಮಂದಿ ಪ್ರಯಾಣಿಸುತ್ತಿದ್ದ ಟಾಟಾ ಸುಮೋ ಕೋಲಾರದ ಮುಳಬಾಗಿಲಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಹಾಸನ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News