ನ್ಯಾಯಾಲಯ ಆವರಣದಲ್ಲೇ ಮಾರಕಾಸ್ತ್ರಗಳಿಂದ ನ್ಯಾಯವಾದಿಯ ಕಗ್ಗೊಲೆ

Update: 2021-02-27 14:13 GMT

ಬಳ್ಳಾರಿ, ಫೆ.27: ಹೊಸಪೇಟೆ ನಗರದ ನ್ಯಾಯಾಲಯದ ಆವರಣದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನ್ಯಾಯವಾದಿಯನ್ನು ಕೊಲೆಗೈದಿರುವ ಘಟನೆ ವರದಿಯಾಗಿದೆ.

ಶನಿವಾರ ಬೆಳಗ್ಗೆ 11:45ರ ಸುಮಾರಿಗೆ ಈ ಘಟನೆ ನಡೆದಿದ್ದು, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ತಾರಿಹಳ್ಳಿ ವೆಂಕಟೇಶ ಕೊಲೆಗೀಡಾದ ನ್ಯಾಯವಾದಿ ಎಂದು ತಿಳಿದುಬಂದಿದೆ.

ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನೋಟರಿ ಕಲ್ಲಂಭಟ್ ಅವರ ಬಳಿ ಮಾತನಾಡುತ್ತ ಕುಳಿತಿರುವಾಗ ವೆಂಕಟೇಶ ಅವರ ಸಂಬಂಧಿ ಮನೋಜ್ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ ಎನ್ನಲಾಗಿದೆ.

ಕುರ್ಚಿಯಲ್ಲಿ ಕುಳಿತ ವೆಂಕಟೇಶ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಮನೋಜ್ ಪೊಲೀಸರಿಗೆ ಶರಣಾಗಿದ್ದು, ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಮನೋಜ್ ಹಾಗೂ ಮೃತ ವೆಂಕಟೇಶ್ ಇಬ್ಬರು ಸಂಬಂಧಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಈ ಕೃತ್ಯವೆಸಗಿದ್ದಾನೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News