10 ರೂ. ಲಂಚ ಪಡೆದಿರುವುದು ಸಾಬೀತಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಮುರುಗೇಶ್ ನಿರಾಣಿ

Update: 2021-02-27 14:18 GMT

ಕೊಪ್ಪಳ, ಫೆ.27: ಎಂಆರ್‍ಎನ್ ಫೌಂಡೇಷನ್ ಮೂಲಕ ನಾವು 5000 ಕೋಟಿ ರೂ.ವ್ಯವಹಾರ ನಡೆಸುತ್ತಿದ್ದು, 75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ನನಗೆ ಯಾರಾದರೂ 10 ರೂ. ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ತಕ್ಷಣವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು.

ಶನಿವಾರ ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉದ್ಯಮಿಯಾಗಿದ್ದು 5-10 ಲಕ್ಷಕ್ಕೆ ಬೇರೆಯವರಿಂದ ಒಡ್ಡುವಂತಹ ದಯನೀಯ ಸ್ಥಿತಿಗೆ ಬಂದಿಲ್ಲ. ನನ್ನ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. 10-20 ಲಕ್ಷದ ಬದಲಿಗೆ 10 ರೂ.ಕೊಟ್ಟಿರುವುದು ಸಾಬೀತಾದರೆ ಒಂದೇ ಒಂದೂ ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

ಇಲಾಖೆಯಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೂ ಸಹಿಸುವುದಿಲ್ಲ. ಅಂತಹ ಮಾಹಿತಿ ಇದ್ದರೆ ನೇರವಾಗಿ ನನಗೆ ದೂರು ಕೊಡಬಹುದು. ಇಲಾಖೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಮುನ್ನಡೆಸುವ ಗುರಿ ಇಟ್ಟುಕೊಂಡಿದ್ದೇನೆ. ಇಡೀ ದೇಶವೇ ಹೊಲಸಾಗಿ ಹೋಗಿದೆ. ಯಾರು ಕೂಡ ಸ್ವಚ್ಛ ಮಾಡದಷ್ಟು ಕಲುಷಿತಗೊಂಡಿದೆ. ಮೊದಲು ನಾವು ನಮ್ಮ ಮನೆಯ ಸ್ವಚ್ಛಗೊಳಿಸಬೇಕು. ನಂತರ ಬೇರೆಯವರ ಬಗ್ಗೆ ಮಾತನಾಡಬೇಕು ಎಂದು ಮುರುಗೇಶ್ ನಿರಾಣಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News