ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಪುರಸಭೆಯ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಅಮಾನತು
ಮಂಡ್ಯ, ಫೆ.27: ಪೌರಕಾರ್ಮಿಕ ನಾರಾಯಣ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ಹಾಗೂ ಆರೋಗ್ಯ ನಿರೀಕ್ಷಕ ಜಾಸ್ಮಿನ್ ಖಾನ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪೌರಾಡಳಿತ ಇಲಾಖೆ ನಿರ್ದೇಶಕಿ ಭಾರತಿ ತಿಳಿಸಿದ್ದಾರೆ.
ನಾರಾಯಣ್ ಆತ್ಮಹತ್ಯೆಗೆ ಮುರುಗೇಶ್, ಜಾಸ್ಮಿನ್ ಖಾನ್ ಕಿರುಕುಳ ಕಾರಣವೆಂದು ನಾರಾಯಣ್ ಅತ್ತೆ ಮಾದೇವಿ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಅಲ್ಲದೆ ತನ್ನ ಸಾವಿಗೆ ಇಬ್ಬರು ಅಧಿಕಾರಿಗಳು ಕಾರಣವೆಂದು ನಾರಾಯಣ್ ಡೆತ್ನೋಟ್ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳಾದ ಮುರುಗೇಶ್, ಜಾಸ್ಮಿನ್ ಖಾನ್ ಅವರು ನಾರಾಯಣ್ ರನ್ನು ಬಲವಂತವಾಗಿ ಮ್ಯಾನ್ಹೋಲ್ಗೆ ಇಳಿಸಿ ಮಲ ಸ್ವಚ್ಛಗೊಳಿಸಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದ ನಾರಾಯಣ್ ಫೆ.22ರಂದು ಮದ್ದೂರಿನ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.