ಸಚಿವ ಯೋಗೇಶ್ವರ ಮರ್ಕಟ ಮನಸ್ಥಿತಿಯ ರಾಜಕಾರಣಿ: ಎಸ್.ಎಲ್.ಭೋಜೇಗೌಡ

Update: 2021-02-28 16:22 GMT

ಬೆಂಗಳೂರು, ಫೆ. 28: ಜೆಡಿಎಸ್‍ ಜೋಕರ್ ಪಕ್ಷ ಎಂದು ಸಚಿವ ಯೋಗೇಶ್ವರ್ ಆರೋಪಿಸಿರುವ ಬೆನ್ನಲ್ಲೇ ತೀರುಗೇಟು ನೀಡಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು, ಯೋಗೇಶ್ವರ್ ಒಬ್ಬ ಮರ್ಕಟ(ಕೋತಿ) ಮನಸ್ಥಿತಿಯ ರಾಜಕೀಯ ಜೋಕರ್ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಭೋಜೇಗೌಡ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೂ ಹೋಗಿ ಬಂದು ಬಿಜೆಪಿಯಲ್ಲಿ ಮಂತ್ರಿಯಾಗಿರುವ ಯೋಗೇಶ್ವರ್ ರಾಜಕೀಯದ ಜೋಕರ್ ಆಗಿ ಕಾಣಿಸುತ್ತಿದ್ದಾರೆ. ಎಚ್‍ಡಿಕೆ ಅವರು ರಾಜಕೀಯದ ಮದಗಜವಾಗಿದ್ದಾರೆ. ಅವರ ಬಗ್ಗೆ ಯೋಗೇಶ್ವರ ಅವರು ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಿಡಿ, ಫೋಟೊಗಳ ವಿಷಯದಲ್ಲಿ ಹುಷಾರಾಗಿರಿ ‘ಸೀಡಿ ಯೋಗೇಶ್ವರ’. ಕಡೆಗೆ ನಿಮ್ಮ ಮಾತು ನಿಮ್ಮ ಮನೆಯವರನ್ನೇ ಬೀದಿಗೆ ತಂದುಬಿಟ್ಟೀತು. ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯಬೇಡಿ. ಬಾಯಿ ಚಪಲಕ್ಕೆ ಮಾತಾಡಬೇಡಿ ಎಂದು ಯೋಗೀಶ್ವರ್ ಗೆ ಎಚ್ಚರಿಸಿದ್ದಾರೆ.

ಸಮುದಾಯವೊಂದರ ನಾಯಕನನ್ನು ಅದೇ ಸಮುದಾಯದವರ ಮೂಲಕವೇ ಹಣಿಯುವುದು ಬಿಜೆಪಿ ತಂತ್ರಗಾರಿಕೆ. ಎಚ್‍ಡಿಕೆ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ನಾಯಕನಾಗಿ ಬೆಳೆಯುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ಮಾತನಾಡಿದವರು, ಅಪ್ಪನಾಣೆ ಇಟ್ಟವರು ವನವಾಸ ಪಡುತ್ತಿದ್ದಾರೆ. ನೀವ್ಯಾವ ಲೆಕ್ಕ ಎಂದು ಭೋಜೇಗೌಡ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News