ಸಿಎಂ ಬಿಎಸ್‌ವೈ ವಿರುದ್ಧ ತಿರುಗಿಬಿದ್ದ ಸಚಿವ ಈಶ್ವರಪ್ಪ: ರಾಜ್ಯಪಾಲ, ಬಿಜೆಪಿ ಹೈಕಮಾಂಡ್ ಗೆ ದೂರು

Update: 2021-03-31 14:37 GMT
ಫೈಲ್ ಚಿತ್ರ

ಬೆಂಗಳೂರು, ಮಾ. 31: ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕೋಲಾಹಲದ ನಡುವೆಯೇ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ಇಲಾಖೆ ವಿಚಾರಗಳಲ್ಲಿ ಕಾನೂನು ಮೀರಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ವರಿಷ್ಠರು ಮತ್ತು ರಾಜ್ಯಪಾಲರಿಗೆ ದೂರು ನೀಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಫೆಬ್ರವರಿ 18ರಂದು ಬಿಜೆಪಿ ರಾಜ್ಯ ವಸ್ತುವಾರಿ ಅರುಣ್ ಸಿಂಗ್ ಅವರಿಗೆ ಎರಡು ಪುಟಗಳ ಸುದೀರ್ಘ ಪತ್ರವನ್ನು ಬರೆದಿರುವ ಈಶ್ವರಪ್ಪ, ಅದೇ ಪತ್ರದ ಪ್ರತಿಯನ್ನು ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೂ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ‘ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರ ಅಧಿಕಾರ ಮೊಟಕುಗೊಳಿಸಿ ಹಸ್ತಕ್ಷೇಪ ಮಾಡುತ್ತಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆ ಹಾಕಬೇಕು' ಎಂದು ಕೋರಿದ್ದಾರೆಂದು ಹೇಳಲಾಗಿದೆ.

‘ಅತ್ಯಂತ ಹಿರಿಯ ಸಚಿವನಾಗಿರುವ ನನಗೆ ನನ್ನ ಇಲಾಖೆ ವಿಚಾರಗಳನ್ನು ನನ್ನ ಗಮನಕ್ಕೆ ತರದೆ ಸಿಎಂ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ನನಗೆ ತೀವ್ರ ಮುಜುಗರ, ನೋವು ತಂದಿದೆ' ಎಂದು ಬೇಸರ ವ್ಯಕ್ತಪಡಿಸಿರುವ ಈಶ್ವರಪ್ಪ, ‘ಆರ್ಥಿಕ ಇಲಾಖೆ ಸಿಎಂ ಬಳಿಯೇ ಇದೆ. ಆದರೆ, ಇಲಾಖೆಯ ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1,200 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂದು ದೂರಿದ್ದಾರೆ.

ಸುಮಾರ್ಗಕ್ಕೆ ಅಡ್ಡಿ: ‘2020-21ರ ಆಯವ್ಯಯದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ‘ಗ್ರಾಮೀಣ ಸುಮಾರ್ಗ ಯೋಜನೆ’ ಪ್ರಕಟಿಸಲಾಗಿತ್ತು. ಈ ಯೋಜನೆಯಡಿ ಐದು ವರ್ಷಗಳಲ್ಲಿ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 780 ಕೋಟಿ ರೂ. ನಿಗದಿ ಮಾಡಲಾಗಿತ್ತು. ಪ್ರತಿ ಕ್ಷೇತ್ರದಲ್ಲಿ 30 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ, ನಿಗದಿ ಮಾಡಿದ ಹಣವನ್ನು ಆರ್ಥಿಕ ಇಲಾಖೆ ನೀಡುತ್ತಿಲ್ಲ' ಎಂದು ಈಶ್ವರಪ್ಪ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

‘ಬಜೆಟ್‍ನಲ್ಲಿ ಘೋಷಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೆ ವಿಶೇಷ ಅನುದಾನದ ಹೆಸರಿನಲ್ಲಿ 1,439 ಕೋಟಿ ರೂ.ಗೆ ಅನುಮೋದನೆ ನೀಡಿದೆ. ಅಲ್ಲದೆ ಫೆ.17ರಂದು ಆರ್ಥಿಕ ಇಲಾಖೆ 81 ವಿಧಾನಸಭಾ ಕ್ಷೇತ್ರಗಳಿಗೆ 775 ಕೋಟಿ ರೂ. ಅನುಮೋದನೆ ನೀಡಿದೆ. ಒಂದೊಂದು ಕ್ಷೇತ್ರಕ್ಕೆ 5 ಕೋಟಿ ರೂ.ಗಳಿಂದ 23 ಕೋಟಿ ರೂ.ಗಳ ವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ' ಎಂದು ಅವರು ದೂರಿದ್ದಾರೆ.

ಅಕ್ರಮಕ್ಕೂ ಕಾರಣ: ‘ಮನಸೋ ಇಚ್ಛೆ ಹಣ ಬಿಡುಗಡೆಯಿಂದ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಇಲಾಖೆ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ದುಷ್ಪರಿಣಾಮ ಬೀರಲಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡದಿದ್ದರೆ ಅಕ್ರಮಕ್ಕೂ ಕಾರಣವಾಗಲಿದೆ' ಎಂದು ಈಶ್ವರಪ್ಪ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಸಿಎಂ ಬಿಎಸ್‍ವೈ ಸಂಬಂಧಿಯೂ ಹೌದು. ಆರ್ಥಿಕ ಇಲಾಖೆಯ ಪತ್ರದಲ್ಲಿ ಬೆಂಗಳೂರು ನಗರ ಜಿ.ಪಂ.ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿ.ಪಂ.ಕ್ಷೇತ್ರಕ್ಕೆ 65 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಮೊತ್ತ ಬಿಡುಗಡೆ ಸಂಬಂಧ ಇಲಾಖೆ ಸಚಿವನ ಗಮನಕ್ಕೆ ತಂದಿಲ್ಲ' ಎಂದು ಈಶ್ವರಪ್ಪ ದೂರಿದ್ದಾರೆ.

‘ಕೋವಿಡ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರ ಹಣ ದುರುಪಯೋಗ ಸರಿಯಲ್ಲ. ಆರ್ಥಿಕ ಇಲಾಖೆಯ ಈ ವರ್ತನೆಯಿಂದ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಮುಂದೆ ನಾನು ತೀವ್ರ ಮುಜುಗರಕ್ಕೆ ಒಳಗಾಗಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದು, ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿ, ವಿಪಕ್ಷಗಳ ಶಾಸಕರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಈ ನೀತಿಯನ್ನು ಬದಲಿಸಿಕೊಳ್ಳಬೇಕು ಎಂದು ಈಶ್ವರಪ್ಪ ಕೋರಿರುವ ಪತ್ರ ಸಾಮಾಜಿಕ ತಾಲತಾಣಗಳಲ್ಲಿ ವೈರಲ್ ಆಗಿದೆ.

‘ಬಿಜೆಪಿ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಶಾಸಕರಿಗೆ ಸಚಿವರ ಮೇಲೆ ನಂಬಿಕೆ ಇಲ್ಲ. ಸಚಿವರಿಗೆ ಸಿಎಂ ಮೇಲೆ ನಂಬಿಕೆಯಿಲ್ಲ. ಸಿಎಂಗೆ ಹೈಕಮಾಂಡ್ ಮೇಲೆ ನಂಬಿಕೆಯಿಲ್ಲ. ಒಟ್ಟಿನಲ್ಲಿ ಈ ಬಿಜೆಪಿ ಸರಕಾರ ಬಂದರೆ ರಾಜ್ಯದ ಜನರಿಗೆ ಬೀದಿನಾಟಕ ತಪ್ಪಿದಲ್ಲಾ!'

-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

‘ಒಬ್ಬ ಸಂಪುಟ ದರ್ಜೆ ಸಚಿವರು ತಮ್ಮ ನಾಯಕನ ವಿರುದ್ಧ ಲಿಖಿತವಾಗಿ ರಾಜ್ಯಪಾಲರು ಮತ್ತು ಕೇಂದ್ರದ ನಾಯಕರಿಗೆ ದೂರು ನೀಡಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು! ರಾಜ್ಯ ಬಿಜೆಪಿ ಸರಕಾರದಲ್ಲಿ ಇರುವ ಲಜ್ಜೆಗೇಡಿತನದ ಗುಂಪುಗಾರಿಕೆಗೆ ನೇರ ಸಾಕ್ಷಿ. ಬಿಜೆಪಿ ನಾಯಕರು ಇದು ಕಾಂಗ್ರೆಸ್ ಕೈವಾಡ ಎಂದು ಹೇಳದಿದ್ದರೆ ಅದು ಜನರ ಪುಣ್ಯ!!'

-ರಮೇಶ್ ಬಾಬು, ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News