ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ನಳಿನ್ ಕುಮಾರ್ ಕಟೀಲ್ ವಿಶ್ವಾಸ

Update: 2021-04-03 13:43 GMT

ಬೆಂಗಳೂರು, ಎ. 3: ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರನ್ನು ಬೆಂಬಲಿಸಿ ವಿವಿಧ ಪಕ್ಷಗಳಿಂದ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವುದರ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರವು ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಅತ್ಯುತ್ತಮ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ಜನಪರ ಕಾರ್ಯಗಳನ್ನು ಜನರು ಬೆಂಬಲಿಸುತ್ತಿದ್ದಾರೆ ಎಂದ ಅವರು, ಮೋದಿ ಅವರ ಸರಕಾರವು ಜನಧನ್ ಖಾತೆಗಳ ಮೂಲಕ ಬಡ ಮಹಿಳೆಯರ ಸಶಕ್ತೀಕರಣ, ಶೌಚಾಲಯದ ಸಮಸ್ಯೆ ಇರುವ ಉತ್ತರ ಕರ್ನಾಟಕದ ಮಹಿಳೆಯರ ಸಮಸ್ಯೆ ನಿವಾರಣೆ ಮಾಡಿದೆ.

ಉಜ್ವಲ ಯೋಜನೆ ಮೂಲಕ ಸಿಲಿಂಡರ್ ಒದಗಿಸುವ ಕಾರ್ಯ, ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ವಿಮೆ ಒದಗಿಸುವ ಸತ್ಕಾರ್ಯ ಮಾಡಿದ್ದಲ್ಲದೆ, ಕೋವಿಡ್ ಸಂದರ್ಭದಲ್ಲಿ ಮನೆ-ಮನೆಗಳಿಗೆ ಆಹಾರ ಧಾನ್ಯ ಒದಗಿಸಿತ್ತು. ಈ ಎಲ್ಲ ಅತ್ಯುತ್ತಮ ಜನಪರ ಯೋಜನೆಗಳನ್ನು ಗಮನಿಸಿ ಮತದಾರರು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲಿಸಲಿದ್ದಾರೆ ಎಂದು ಕಟೀಲ್ ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಮುಖವನ್ನು ಸಿದ್ದರಾಮಯ್ಯ ಅವರು ನೋಡುತ್ತಿಲ್ಲ. ಸಿದ್ದರಾಮಯ್ಯ ಮುಖವನ್ನು ಡಿ.ಕೆ.ಶಿವಕುಮಾರ್ ನೋಡುತ್ತಿಲ್ಲ, ಕಾಂಗ್ರೆಸ್ ಒಳಜಗಳ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ. ಜೆಡಿಎಸ್ ರಾಜ್ಯದಲ್ಲಿ ಕಳೆದು ಹೋಗಿದೆ. ಕಾಂಗ್ರೆಸ್ ಪಕ್ಷವು ಒಳಜಗಳದಿಂದಾಗಿ ನೆಲೆ ಕಳೆದುಕೊಳ್ಳಲಿದೆ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.     

ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದೆ. ಬಿಜೆಪಿ ಹಡಗು ತುಂಬುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರದ ಗದ್ದುಗೆಗೆ ಏರಲು ‘ಅಹಿಂದ'ವನ್ನು ಬಳಸಿಕೊಂಡರು. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ದಲಿತರಿಗೆ ನ್ಯಾಯವನ್ನು ಒದಗಿಸಿಲ್ಲ. ದಲಿತ ಮುಖಂಡರನ್ನು ಅಧಿಕಾರ ಪಡೆಯಲು ಮಾತ್ರ ಬಳಸಿಕೊಂಡಿದೆ ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷವು ಕೇವಲ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ದಲ್ಲ, ಅದು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೂ ಅನ್ಯಾಯ ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರಾಣ ತ್ಯಾಗ ಆದಾಗ ಅವರ ಶವ ಸಂಸ್ಕಾರಕ್ಕೆ ಹೊಸದಿಲ್ಲಿಯಲ್ಲಿ ಜಾಗ ನೀಡದೆ ಅನ್ಯಾಯ ಮಾಡಿದೆ. ಲೋಕಸಭಾ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದಾಗ ಅವರ ಸೋಲಿಗೆ ಕಾರಣವಾಗಿತ್ತು ಎಂದು ಕಟೀಲ್ ದೂರಿದರು. 

ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿಸಿದ ಕಾಂಗ್ರೆಸಿಗರು ಶಾಸಕರ ಮನೆಗೆ ಬೆಂಕಿ ಹಾಕಿದ ಸಂಪತ್‍ರಾಜ್‍ನನ್ನು ಈವರೆಗೆ ಉಚ್ಚಾಟನೆ ಮಾಡಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ಕೊಟ್ಟಿಲ್ಲ, ಕಾಂಗ್ರೆಸ್‍ಗೆ ಅಂಬೇಡ್ಕರ್ ಅವರ ಶಾಪ ಇದೆ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸವನ್ನು ಪ್ರಧಾನಿ ಮೋದಿ ಅವರ ಸರಕಾರ ಮಾಡಿದೆ ಎಂದು ಕಟೀಲ್ ಇದೇ ವೇಳೆ ತಿಳಿಸಿದರು. ಕಾಂಗ್ರೆಸ್ ಪಕ್ಷದ ಎಸ್ಸಿ ಮುಖಂಡ ರವಿ ಗಾಯಕವಾಡ್ ಮತ್ತು ಅವರ ಬೆಂಬಲಿಗರು, ಟೋಕರಿ ಕೋಲಿ ಸಮಾಜದ ತಾಲೂಕಿನ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. 

ಈ ವೇಳೆ ಭಗವಂತ ಖೂಬಾ, ಸಚಿವ ಪ್ರಭು ಚೌಹಾಣ್, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಟಾಳ್ಕರ್, ಅಭ್ಯರ್ಥಿ ಶರಣು ಸಲಗರ್, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು..

‘ಬಿಜೆಪಿ, ಆರೆಸೆಸ್ಸ್ ವಿಷಕಾರಿ ಸಿದ್ಧಾಂತ ಹೊಂದಿದೆ ಎಂಬ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ವಿಷಕಾರಿ. ಅವರ ನಿಜವಾದ ಮುಖ ಅರ್ಥ ಮಾಡಿಕೊಂಡ ಕಲಬುರ್ಗಿ ಜನತೆ ಅವರನ್ನು ಸೋಲಿಸಿದ್ದಾರೆ. ಮೊದಲು ಖರ್ಗೆ ತಾವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ನಿಜಕ್ಕೂ ಖರ್ಗೆ ಒಳ್ಳೆಯವರಾಗಿದ್ದರೆ ಜನರೇಕೆ ಸೋಲಿಸುತ್ತಿದ್ದರೆಂಬುದನ್ನು ಅರ್ಥ ಮಾಡಿಕೊಳ್ಳಲಿ’ 
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News