ಶಿವಮೊಗ್ಗ: ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆ ಸಾಕಾನೆ ದಾಳಿ

Update: 2021-04-04 13:02 GMT

ಶಿವಮೊಗ್ಗ, ಎ.4: ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆಯೇ ಸಾಕಾನೆಯೊಂದು ದಾಳಿ ಮಾಡಿರುವ ಘಟನೆ ರವಿವಾರ ನಡೆದಿದೆ.

ಡಾ.ವಿನಯ್‌ಕುಮಾರ್‌ ಅವರ ಮೇಲೆ ಇತ್ತೀಚೆಗೆ ಚಿತ್ರದುರ್ಗದ ಮುರುಘಾಮಠದಿಂದ ಶಿವಮೊಗ್ಗದ ಆನೆ ಬಿಡಾರಕ್ಕೆ ತರಲಾಗಿರುವ ನೀಲಾಂಬರಿ ಎಂಬ ಆನೆ ದಾಳಿ ನಡೆಸಿದೆ.

ಚಿಕಿತ್ಸೆ ನೀಡುತ್ತಿದ್ದಾಗ ಸೊಂಡಿಲಿನಿಂದ ತಳ್ಳಿ ಕೆಳಗೆ ಬಿದ್ದ ವೈದ್ಯರ ಮೇಲೆ ದಾಳಿ ಮಾಡಿದೆ. ಶಾಂತವಾಗಿಯೇ ಇದ್ದ ನೀಲಾಂಬರಿ ಏಕಾಏಕಿ ಸಿಟ್ಟಿಗೆದ್ದಿದ್ದು, ಡಾ. ವಿನಯ್‌ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಆನೆ ಸಮೀಪ ಅದರ ಮಾವುತ ಮತ್ತು ಕಾವಾಡಿ ಮಾತ್ರ ಇದ್ದರು. ಇನ್ನುಳಿದ ಸಿಬ್ಬಂದಿ ಕ್ಯಾಂಪ್‌ನಲ್ಲಿದ್ದರು. ಆನೆ ತಳ್ಳಿದ ತಕ್ಷಣ ವೈದ್ಯರು ಕಿರುಚಿಕೊಂಡಿದ್ದಾರೆ. ಅದೃಷ್ಟವಷಾತ್‌ ಹೆಚ್ಚು ಹಾನಿಯಾಗಿಲ್ಲ. ಕಾಲಿಗೆ ಅಲ್ಪಸ್ವಲ್ಪ ಗಾಯವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

ಆದರೆ, ಎಕ್ಸ್‌ರೇ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿದ ಬಳಿಕ ಯಾವುದೇ ಗಂಭೀರ ಸಮಸ್ಯೆಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದು, ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News