ಸೀಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ನಾನು ಸಚಿವನಾಗಿಲ್ಲ: ಸಚಿವ ನಿರಾಣಿಗೆ ಶಾಸಕ ಯತ್ನಾಳ್ ತಿರುಗೇಟು
ವಿಜಯಪುರ, ಎ. 4: ‘ಯಾರು ಲಾಯಕ್ಕು, ಯಾರು ನಾಲಾಯಕ್ ಎನ್ನುವುದು ಜನತೆಗೆ ಗೊತ್ತಿದೆ. ಮಾಜಿ ಸಚಿವ ಎಚ್.ವೈ.ಮೇಟಿಯವರ ಸೀಡಿ ಮಾಡಿದವರು ನಾಲಾಯಕ್. ಯಾರ್ಯಾರಿಗೆ ಸಪ್ಲೈಯರ್ ಆಗಿದ್ದರು ಅವರು ನಾಲಾಯಕ್' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಯಾರಿಗೂ ಸಪ್ಲೈಯರ್ ಅಲ್ಲ, ಯಾರಿಗೂ ಹಣ ಕೊಟ್ಟಿಲ್ಲ. ಮಂತ್ರಿಯಾಗಲು ಯಾರೊಬ್ಬರ ಕೈ-ಕಾಲು ಹಿಡಿದಿಲ್ಲ, ಶಾಸಕನಾಗಲು ನಾನು ಯಾರ ಕಾಲು ಹಿಡಿದಿಲ್ಲ. ಅಂತಹ ನಾಲಾಯಕರಿಂದ ನಾನೂ ಏನೂ ಕಲಿಯಲು ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಪ್ಲೈಯರ್ ಯಾರ್ಯಾರಿಗೆ ಏನೇನು ಸಪ್ಲೈ ಮಾಡಿದ್ದಾನೆಂದು ಗೊತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮೇಲಿನವರಿಗೆ ಏನೇನು ಸಪ್ಲೈ ಮಾಡಿದ್ದಾರೆಂದು ಎಲ್ಲವನ್ನೂ ಕಾಲ ಬಂದಾಗ ಹೇಳುತ್ತೇನೆ. ಸೀಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ನಾನು ಸಚಿವನಾಗಿಲ್ಲ, ಆಗುವುದು ಇಲ್ಲ' ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.