ಲಾಕ್‍ಡೌನ್ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ: ಡಿಸಿಎಂ ಅಶ್ವತ್ಥನಾರಾಯಣ ಸ್ಪಷ್ಟನೆ

Update: 2021-04-12 17:11 GMT

ಬೆಂಗಳೂರು, ಎ. 12: ಕೋವಿಡ್ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ವಲಯದಲ್ಲಿ ದಿನಕ್ಕೆ 10 ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸೋಮವಾರ ನಗರದ ಮಲ್ಲೇಶ್ವರದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ನಗರದ ಪಶ್ಚಿಮ ವಲಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಅವಲೋಕನ ನಡೆಸಿದ ಅವರು, ಇದೀಗ ದಿನಕ್ಕೆ 6 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ದಿನಕ್ಕೆ 8 ಸಾವಿರ ಜನರನ್ನು ತಪಾಸಣೆಗೆ ಒಳಪಡಿಸಲಾಗುವುದು. ಈ ಪ್ರಮಾಣವನ್ನು 10 ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ತಿಳಿಸಿದರು.

ಎ.1ರಿಂದ 10ನೆ ತಾರೀಖಿನೊಳಗೆ ಇದ್ದಕ್ಕಿದ್ದ ಹಾಗೆ ಪಶ್ಚಿಮ ವಲಯವೂ ಸೇರಿ ಇಡೀ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅದಕ್ಕಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ಯಾರೇ ಓರ್ವ ಸೋಂಕಿತ ಪತ್ತೆಯಾದ ಮೇಲೆ ಆತನ ಪ್ರಾಥಮಿಕ ಮತ್ತು ದ್ವಿತಿಯ ಹಂತದ ಸಂಪರ್ಕದಲ್ಲಿರುವ ಕನಿಷ್ಠ 20 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಅವರು ಆಸ್ಪತ್ರೆ ಅಥವಾ ತಮ್ಮ ಮನೆಯಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಅವರಿಗೆ ಎಲ್ಲ ರೀತಿಯ ಔಷಧೋಪಚಾರ ಮಾಡಲಾಗುವುದು. ಈಗಾಗಲೇ ಈ ವಲಯದಲ್ಲಿ 4,500ಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕೋವಿಡ್ ಮಾರ್ಗಸೂಚಿಯಂತೆ ಮೆಡಿಕಲ್ ಕಿಟ್ ನೀಡಲಾಗಿದ್ದು ಕಾಲಕಾಲಕ್ಕೆ ಅವರ ಮೇಲೆ ನಿಗಾ ಇರಿಸಲಾಗಿದೆ. ಇನ್ನೂ 700 ಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಅವರು ತಿಳಿಸಿದರು.

ಹೆಲ್ಪ್ ಲೈನ್: ಈ ವಲಯದಲ್ಲಿ ಎಲ್ಲೆಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗುತ್ತದೆ. ನವ ಮಾಧ್ಯಮಗಳ ಮೂಲಕ, ಮಾಧ್ಯಮಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ಮಾಹಿತಿ ಕೊಡಲಾಗುತ್ತಿದೆ. ಕೋವಿಡ್ ಹೆಲ್ಪ್ ಲೈನ್ 080-6824 8454 ಸಂಖ್ಯೆಗೆ ದಿನದ 24 ಗಂಟೆಯೂ ಕಾಲ್ ಮಾಡಬಹುದು. ಜತೆಗೆ, ವಲಯದಲ್ಲಿ 84 ಮೊಬೈಲ್ ತಂಡಗಳಿವೆ. ಕೂಡಲೇ ಈ ತಂಡಗಳ ಸಂಖ್ಯೆಯನ್ನು 100ಕ್ಕೇರಿಸಲಾಗುವುದು. ಇನ್ನು ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ಬಹಳ ವೈಜ್ಞಾನಿಕವಾಗಿ ಲೈನಪ್ ಮಾಡಲಾಗಿದೆ. ಜತೆಗೆ, ಜನರಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ 24 ಗಂಟೆಯೊಳಗೇ ರಿಸಲ್ಟ್ ಕೊಡಲಾಗುತ್ತಿದೆ ಎಂದರು.

ಹಾಸಿಗೆಗಳ ಕೊರತೆ ಇಲ್ಲ: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದರೂ ಪಶ್ಚಿಮ ವಲಯದ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಇಲ್ಲ. ಹೀಗಾಗಿ ಜನರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಇಲ್ಲ. ಎಲ್ಲಡೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸೋಂಕು ಬಂದಾಗ ಕಾಯಿಲೆಯ ತೀವ್ರತೆ ಹೆಚ್ಚಾಗಿತ್ತು. ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದರೂ ಆದರ ತೀವ್ರತೆ, ಅಂದರೆ; ಜೀವಕ್ಕೆ ಅಪಾಯವಾಗುವ ಪ್ರಮಾಣ ಕಡಿಮೆಯಾಗಿದೆ. ಜೀವಕ್ಕೆ ಅಪಾಯವಿಲ್ಲ. ಹೆದರುವ ಅಗತ್ಯ ಇಲ್ಲ ಎಂದು ಅವರು ಅಭಯ ನೀಡಿದರು.

ಲಸಿಕೆಗೆ ಉತ್ತಮ ಪ್ರತಿಕ್ರಿಯೆ: ಪಶ್ಚಿಮ ವಿಭಾಗದಲ್ಲಿ ನಿಗದಿ ಮಾಡಿದಂತೆ ಶೇ.45ರಷ್ಟು ವ್ಯಾಕ್ಸಿನೇಷನ್ ಗುರಿ ತಲುಪಲಾಗಿದೆ. ಲಸಿಕೆ ಲಭ್ಯವಿದ್ದು, 45 ವರ್ಷ ಮೇಲ್ಪಟ್ಟವರಿಗೆ ಎಲ್ಲಡೆ ವ್ಯಾಕ್ಸಿನ್ ಕೊಡಲಾಗುತ್ತಿದೆ. ಪ್ರತಿಯೊಬ್ಬರೂ ತಮಗೆ ಸಮೀಪ ಇರುವ ಲಸಿಕಾ ಕೇಂದ್ರಕ್ಕೆ ಹೋಗಿ ವ್ಯಾಕ್ಸಿನ್ ಪಡೆಯಬೇಕು. ವ್ಯಾಕ್ಸಿನ್ ಪಡೆದರೆ ಸೋಂಕಿನ ಸಂಪರ್ಕ ಕೊಂಡಿಯನ್ನು ತುಂಡರಿಸಲು ಸಾಧ್ಯ. ಹೀಗಾಗಿ ಲಸಿಕೆ ಹಾಕುವುದನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಮಾಹಿತಿ ನೀಡಲಾಗಿದೆ ಎಂದು ಸಲಹೆ ಮಾಡಿದರು.

ಲಾಕ್ ಡೌನ್ ಇಲ್ಲ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್‍ಡೌನ್ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಈಗಾಗಲೇ ಸ್ಪಷ್ಟ ಮಾತುಗಳಲ್ಲೇ ಹೇಳಿದ್ದಾರೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು ಎಂಬುದು ಸರಕಾರದ ನಿಲುವು. ಹೀಗಾಗಿ ಕೆಲ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಜನರೂ ಸರಕಾರ ಕೈಗೊಳ್ಳುವ ಕ್ರಮಗಳನ್ನು, ಕೊಡುವ ಸೂಚನೆಗಳನ್ನು ಪಾಳಿಸಬೇಕು. ಈಗ ವಿಧಿಸಲಾಗಿರುವ ನೈಟ್ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು'

-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News